ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಪ್ರಯೋಗ ಶಾಲೆಯಾದ ಶಿರಾ

Last Updated 12 ನವೆಂಬರ್ 2020, 7:47 IST
ಅಕ್ಷರ ಗಾತ್ರ

ತುಮಕೂರು: ಪಕ್ಷದ ಅಸ್ತಿತ್ವವೇ ಇಲ್ಲದ ಶಿರಾ ಕ್ಷೇತ್ರವನ್ನು ಬಿಜೆಪಿ ‘ಜಯಿಸುವ’ ಮೂಲಕ ಚುನಾವಣೆ ಗೆಲುವಿನ ತಂತ್ರಗಾರಿಕೆಯ ಪ್ರಯೋಗ ಶಾಲೆ ಮಾಡಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಇದೊಂದು ಮಾದರಿ ‘ಕಾರ್ಯತಂತ್ರ’ ಎಂದೇ ಪಕ್ಷದ ನಾಯಕರು ಹೇಳುತ್ತಿದ್ದಾರೆ.

ಶಿರಾದಲ್ಲಿ ಬಿಜೆಪಿ ಗೆಲುವು ಜಿಲ್ಲೆಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ. ಕಾಂಗ್ರೆಸ್ ವಲಯದಲ್ಲಿ ಒಂದು ರೀತಿಯಲ್ಲಿ ಆತಂಕ ಕಂಡುಬಂದಿದ್ದು, ನಾಯಕರು, ಕಾರ್ಯಕರ್ತರ ನಡುವೆ ಶೂನ್ಯ ಆವರಿಸಿದೆ. ಎಷ್ಟೆಲ್ಲ ಪ್ರಯತ್ನಪಟ್ಟರೂ ಗೆಲುವು ಸಾಧ್ಯವಾಗಲಿಲ್ಲ. ಪಕ್ಷದ ಮತಗಳು ಅಷ್ಟಾಗಿ ಚದುರಿ ಹೋಗಿಲ್ಲ. ಆದರೆ ಜಯಚಂದ್ರ ಅವರಿಗೆ ಜಯ ಸಿಗಲಿಲ್ಲ ಎಂಬ ನೋವು ಕಾಡುತ್ತಿದೆ. ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಿದ್ದರೆ, ಬಿಜೆಪಿ ನಾಯಕರು ಗೆಲುವಿನಿಂದ ಬೀಗುತ್ತಿದ್ದಾರೆ.

ಪ್ರಯೋಗಕ್ಕೆ ಸಿದ್ಧತೆ: ಗೆಲುವಿನ ಉತ್ಸಾಹದಲ್ಲಿ ಬಿಜೆಪಿ ನಾಯಕರು ಮತ್ತಷ್ಟು ತಂತ್ರಗಾರಿಕೆ ಪೋಣಿಸಲು ಅಣಿಯಾಗುತ್ತಿದ್ದಾರೆ. ಜಾತಿ, ಸಮುದಾಯ ಹಾಗೂ ವಿಶೇಷವಾಗಿ ಯುವಕರನ್ನು ಸೆಳೆಯುವುದು ಮತ್ತು ‘ಕಟ್ಟಿಹಾಕುವ’ ಕಾರ್ಯತಂತ್ರವು ಹೊಸ ಪ್ರಯೋಗದಂತೆ ಕಂಡಿದೆ. ನೂತನ ವಿಧಾನಗಳನ್ನು ಪ್ರಯೋಗಿಸಿ ಯಶಸ್ಸು ಕಂಡಿರುವುದು ಮತ್ತೆಮತ್ತೆ ಚಾಲನೆಗೆ ತರಲು ಪ್ರೇರೇಪಿಸಿದಂತಿದೆ. ಪಕ್ಷದ ಅಸ್ತಿತ್ವ ಗಟ್ಟಿಗೊಳಿಸಲು ಹೊಸ ಅನುಭವಗಳು ನೆರವಿಗೆ ಬರಲಿವೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಮುಂಬರುವ ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜಿಲ್ಲೆಯಲ್ಲಿ ಈವರೆಗೂ ಗೆಲ್ಲಲು ಸಾಧ್ಯವಾಗದ ಕ್ಷೇತ್ರಗಳಿಗೂ ಹೊಸ ‘ಪ್ರಯೋಗ’ ವಿಸ್ತರಿಸಲು ಬಿಜೆಪಿ ನಾಯಕರು ಸಿದ್ಧತೆ ಆರಂಭಿಸಿದ್ದಾರೆ. ಪಾವಗಡ, ಮಧುಗಿರಿ, ಕೊರಟಗೆರೆ ಭಾಗಕ್ಕೂ ‘ಶಿರಾ ಮಾದರಿ’ ಕಾಲಿಡಲಿದೆ. ಶಿರಾದಲ್ಲಿ ಠೇವಣಿ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ ಪಕ್ಷವನ್ನು ಗೆಲ್ಲುವ ಮಟ್ಟಕ್ಕೆ ತೆಗೆದುಕೊಂಡು ಹೋಗುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಪ್ರಯತ್ನಕ್ಕೆ ಜಯ ಸಿಕ್ಕಿದೆ. ಪಕ್ಷದ ಸಾಂಪ್ರದಾಯಿಕ ಮತಗಳ ಜತೆಗೆ ಬಿಜೆಪಿ ಕಡೆಗೆ ಬರಬಹುದಾದ ಜಾತಿ, ಸಮುದಾಯವನ್ನು ಕೇಂದ್ರೀಕರಿಸಿ ಸೆಳೆಯುವ ಪ್ರಯತ್ನ ಈ ಚುನಾವಣೆಯಲ್ಲಿ ಫಲನೀಡಿದೆ. ಅಂತಹ ಪ್ರಯತ್ನ ಮುಂದುವರಿಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈಗಾಗಲೇ ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳನ್ನು ಮತ್ತಷ್ಟು ಗಟ್ಟಿಮಾಡಿಕೊಳ್ಳುವುದು. ನಂತರ ನಿಧಾನವಾಗಿ ಇತರ ಕ್ಷೇತ್ರಗಳಿಗೆ ಹೆಜ್ಜೆ ಹಾಕುವುದು. ಈವರೆಗೆ ಗೆಲ್ಲಲು ಸಾಧ್ಯವಾಗದ ಕ್ಷೇತ್ರಗಳನ್ನು ಪಟ್ಟಿಮಾಡಿಕೊಂಡು ಆದ್ಯತೆ ಮೇರೆಗೆ ಏನೆಲ್ಲ ಮಾಡಬಹುದು ಎಂಬ ಸಿದ್ಧತೆಗಳನ್ನು ಚುನಾವಣೆಗೆ ಮುನ್ನವೇ ಆರಂಭಿಸುವುದು. ಚುನಾವಣೆ ಹತ್ತಿರ ಬರುತ್ತಿದ್ದಂತೆ ‘ಪ್ರಯೋಗ’ದ ಬಾಣ ಬಿಡುವುದು ಪ್ರಮುಖ ಕಾರ್ಯತಂತ್ರ ಎಂದು ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

*****

ಜಯಚಂದ್ರ ರಾಜಕೀಯ ಭವಿಷ್ಯ

ಶಿರಾದಲ್ಲಿ ಸೋಲುವುದರೊಂದಿಗೆ ಕಾಂಗ್ರೆಸ್‌ನ ಹಿರಿಯ ನಾಯಕ ಟಿ.ಬಿ.ಜಯಚಂದ್ರ ಅವರ ರಾಜಕೀಯ ಭವಿಷ್ಯವೂ ಮಂಕಾಗಿದೆ. ಈ ಬಾರಿ ಗೆದಿದ್ದರೆ ಮುಂದಿನ ಚುನಾವಣೆ ವೇಳೆಗೆ ಸಕ್ರಿಯ ರಾಜಕೀಯದಿಂದ ಹಿಂದೆ ಸರಿಯುವ ಮನಸ್ಸು ಮಾಡುತ್ತಿದ್ದರು. ಗೌರವಯುತವಾಗಿ ನಿವೃತ್ತಿ ಪಡೆಯುತ್ತಿದ್ದರು.

ಆದರೆ ಈಗ ಸೋತಿರುವುದು ಅವರ ರಾಜಕೀಯ ಭವಿಷ್ಯವನ್ನು ತೂಗುಯ್ಯಾಲೆಗೆ ತಳ್ಳಿದೆ. 70 ವರ್ಷ ದಾಟಿದ್ದು, ವಯಸ್ಸಾದವರಿಗೆ ಪದೇಪದೇ ಏಕೆ ಟಿಕೆಟ್ ಕೊಡಲಾಗುತ್ತಿದೆ ಎಂಬ ಆಕ್ಷೇಪದ ಮಾತುಗಳು ಪಕ್ಷದ ಆಂತರಿಕ ವಲಯದಿಂದಲೇ ಕೇಳಿ ಬರುತ್ತಿವೆ. ಟಿಕೆಟ್ ನೀಡಿದ್ದಕ್ಕೆಕೆಪಿಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗುವುದೆ? ಇಲ್ಲವೆ ರಾಜಕೀಯ ನಿವೃತ್ತಿ ಘೋಷಿಸುವರೆ? ಅಥವಾ ಇನ್ನೊಂದು ಕೊನೆಯ ಅವಕಾಶ ಕೊಡಿ. ಇದು ಸಾಧ್ಯವಾಗದಿದ್ದರೆ ಮಗನಿಗೆ ಟಿಕೆಟ್ ಕೊಡಿ ಎಂದು ವರಿಷ್ಠರ ಬಳಿ ಬೇಡಿಕೆ ಸಲ್ಲಿಸುವರೆ ಎಂಬ ಪ್ರಶ್ನೆಗಳು ಮೂಡಿವೆ.

ಕಳ್ಳಂಬೆಳ್ಳ, ಶಿರಾ ಕ್ಷೇತ್ರದಲ್ಲಿ ಒಟ್ಟು 10 ಬಾರಿ ಸ್ಪರ್ಧಿಸಿ 6 ಸಲ ಶಾಸಕರಾಗಿದ್ದರು. ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವರಾಗಿ ಮಹತ್ವದ ಖಾತೆಗಳನ್ನು ನಿರ್ವಹಿಸಿದ್ದರು. ಶಿರಾ ಕ್ಷೇತ್ರದ ಅಭಿವೃದ್ಧಿಗೂ ಸಾಕಷ್ಟು ಶ್ರಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT