ಶಿರಾ: ಶಿರಾ ವಿಧಾನಸಭೆ ಉಪಚುನಾವಣೆಯಲ್ಲಿ ಡಾ.ಸಿ.ಎಂ.ರಾಜೇಶ್ ಗೌಡ ಅವರಿಗೆ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎಂದುಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ಮಂಜುನಾಥ್ ಹೇಳಿದ್ದಾರೆ.
ಜುಂಜುರಾಮನಹಳ್ಳಿ ಬಳಿ ಮಂಗಳವಾರ ನಡೆದ ಬಿಜೆಪಿ ಸಭೆಯಲ್ಲಿ ಈ ವಿಷಯ ಪ್ರಕಟಿಸುತ್ತಿದ್ದಂತೆಯೇ ಕಾರ್ಯಕರ್ತರ ಆಕ್ರೋಶ ಕಟ್ಟೆಯೊಡೆಯಿತು.
‘ನಾಲ್ಕು ದಿನದ ಹಿಂದೆ ಪಕ್ಷಕ್ಕೆ ಸೇರ್ಪಡೆಯಾದ ರಾಜೇಶ್ ಅವರಿಗೆ ಟಿಕೆಟ್ ನೀಡಬಾರದು. ಪಕ್ಷಕ್ಕೆ ದುಡಿದ ಮಂಜುನಾಥ್ ಅಥವಾ ಎಸ್.ಆರ್.ಗೌಡ ಅವರಲ್ಲಿ ಒಬ್ಬರಿಗೆ ಟಿಕೆಟ್ ನೀಡಬೇಕು’ ಎಂದು ಪಟ್ಟು ಹಿಡಿದರು.
‘ವರಿಷ್ಠರ ನಿರ್ಧಾರದಿಂದ ನಮಗಿಬ್ಬರಿಗೂ ನೋವಾಗಿದೆ.ಆದರೆ, ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ’ ಎಂದು ಮಂಜುನಾಥ್ ಭರವಸೆ ನೀಡಿದರು.‘ನೀವಿಬ್ಬರೂ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧ’ ಎಂದು ಕಾರ್ಯಕರ್ತರು ನಿರ್ಣಯ ತೆಗೆದುಕೊಂಡರು.
‘ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡಿದರೆ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು ಎಂದು ವರಿಷ್ಠರಿಗೆ ತಿಳಿಸಿದ್ದೇವೆ.ಸರ್ವೆ ನಡೆಸಿ ಅಭ್ಯರ್ಥಿಯನ್ನು ನಿಶ್ಚಯ ಮಾಡುವುದಾಗಿ ನಾಯಕರು ಭರವಸೆ ನೀಡಿದ್ದಾರೆ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರಿ ಎಂದೂ ಸೂಚ್ಯವಾಗಿ ತಿಳಿಸಿದ್ದಾರೆ’ ಎಂದು ಮಂಜುನಾಥ್ ಹೇಳಿದರು.