ತುಮಕೂರು: ಮಹಾ ಶಿವರಾತ್ರಿ ಪ್ರಯುಕ್ತ ಶುಕ್ರವಾರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶಿವ ನಾಮ ಸ್ಮರಣೆ ಮಾಡಲಾಯಿತು. ದೇಗುಲಗಳಲ್ಲಿ ವಿಶೇಷ ಪೂಜೆ, ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು.
ಹಲವರು ಶಿವರಾತ್ರಿಯ ದಿನ ಉಪವಾಸ ಇದ್ದು, ಪೂಜೆಯಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆಯಿಂದಲೇ ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು. ನಗರದ ಪಶುಪತಿನಾಥ ದೇವಾಲಯ, ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ಪ್ರಮುಖ ದೇಗುಲಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ತಳಿರು, ತೋರಣ, ಬಾಳೆ ದಿಂಡುಗಳಿಂದ ದೇಗುಲಗಳನ್ನು ಸಿಂಗರಿಸಲಾಗಿತ್ತು.
ಪಶುಪತಿನಾಥ ದೇವಸ್ಥಾನದಲ್ಲಿ ಶಿವನ ಮೂರ್ತಿಗೆ ಕ್ಷೀರಾಭಿಷೇಕ, ಬಿಲ್ವಾರ್ಚನೆ ನೆರವೇರಿತು. ಸಂಜೆ ಭರತನಾಟ್ಯ, ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸಿದ್ಧಗಂಗಾ ಮಠದಲ್ಲಿ ವಿಶೇಷ ಪೂಜೆ ನೆರವೇರಿತು. ತಾಲ್ಲೂಕಿನ ಅಯ್ಯನಪಾಳ್ಯದಲ್ಲಿ ನಂಜುಂಡೇಶ್ವರ ಸ್ವಾಮಿಯ ರಥೋತ್ಸವ ನೆರವೇರಿತು.
21 ಜ್ಯೋತಿರ್ಲಿಂಗ ಮೆರವಣಿಗೆ: ಮೆಳೆಕೋಟೆಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶಿವಧ್ಯಾನ, ಶಿವ ಧ್ವಜಾರೋಹಣ ನೆರವೇರಿತು. ನಂತರ 21 ಲಿಂಗಗಳ ಮೆರವಣಿಗೆ ನಡೆಯಿತು. ನಗರದ ಪ್ರಮುಖ ರಸ್ತೆ, ಬಡಾವಣೆಗಳಲ್ಲಿ ಮೆರವಣಿಗೆ ಸಂಚರಿಸಿತು.
ರಿಂಗ್ ರಸ್ತೆಯಿಂದ ಶುರುವಾದ ಮೆರವಣಿಗೆಯು ಎಸ್ಎಸ್ಐಟಿ ಕಾಲೇಜು, ಕಾಲ್ಟ್ಯಾಕ್ಸ್ ವೃತ್ತ, ಬಿಜಿಎಸ್ ವೃತ್ತದಿಂದ ಎಂ.ಜಿ.ರಸ್ತೆ, ಹೊರಪೇಟೆ ವೃತ್ತ, ಕೆ.ಆರ್.ಬಡಾವಣೆ, ಭದ್ರಮ್ಮ ಛತ್ರ, ಎಸ್.ಎಸ್.ಪುರಂ, ಎಸ್ಐಟಿ, ಬಟವಾಡಿ, ಎಸ್.ಎಸ್.ವೃತ್ತ, ಕುಣಿಗಲ್ ರಸ್ತೆ ಮುಖಾಂತರ ವಿ.ವಿ ತಲುಪಿತು.
ತುಮಕೂರಿನಲ್ಲಿ ಶುಕ್ರವಾರ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಜ್ಯೋತಿರ್ಲಿಂಗಗಳ ಮೆರವಣಿಗೆ ನಡೆಯಿತು
ತುಮಕೂರಿನ ಸೋಮೇಶ್ವರ ದೇವಸ್ಥಾನ ಬಳಿ ಶುಕ್ರವಾರ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು