ತಿಪಟೂರು: ಪ್ರತಿಯೊಬ್ಬರು ಜೀವನದಲ್ಲಿಯೂ ಕ್ರೀಡೆ ಅವಿಭಾಜ್ಯ ಅಂಗವಾಗಬೇಕಿದ್ದು, ದೈಹಿಕ ಸದೃಢತೆ ಬಗ್ಗೆ ಕಾಳಜಿವಹಿಸುವ ಅಗತ್ಯವಿದೆ ಎಂದು ಡಿವೈಎಸ್ಪಿ ಸಿದ್ಧಾರ್ಥ ಗೋಯಲ್ ತಿಳಿಸಿದರು.
ನಗರದ ಅರಳಿಕಟ್ಟೆ ಬಳಿ ಭಾನುವಾರ ತಿಪಟೂರು ಸ್ಫೋರ್ಟ್ ಕ್ಲಬ್ ಮತ್ತು ರೋಟರಿ ಸಂಸ್ಥೆ ಸಹಯೋಗದಲ್ಲಿ ನಡೆದ ಪುರುಷರ ಮತ್ತು ಮಹಿಳೆಯರ ಓಟದ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.
ಕ್ರೀಡೆ ಇಂದಿನ ದಿನದಲ್ಲಿ ಪ್ರತಿಯೊಬ್ಬರಿಗೂ ಅತ್ಯವಶ್ಯಕ. ಸ್ಫರ್ಧಾ ಮನೋಭಾವನೆಯಿಂದ ಭಾಗವಹಿಸಿ ದೈಹಿಕ ಮತ್ತು ಮಾನಸಿಕ ಶಕ್ತಿ ವೃದ್ಧಿಸಿಕೊಳ್ಳುವತ್ತ ಚಿತ್ತ ಹರಿಸಬೇಕು. ಆರೋಗ್ಯ ಹಾಗೂ ಸುಸ್ಥಿರತೆಗೆ ಕ್ರೀಡೆ ಹೆಚ್ಚು ಬಲ ನೀಡುತ್ತದೆ. ಅದರ ಮಹತ್ವ ಅರಿತು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ತಿಪಟೂರು ಸ್ಫೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಲೋಕೇಶ್ವರ ಮಾತನಾಡಿ, 4 ದಶಕಗಳಿಂದ ತಾಲ್ಲೂಕಿನಲ್ಲಿ ನಡೆಸಿರುವ ಕ್ರೀಡಾ ಸ್ಫರ್ಧೆಗಳಲ್ಲಿ ನೂರಾರು ಕ್ರೀಡಾ ಪಟುಗಳು ನಾಡಿಗೆ ಪರಿಚಯಿಸಿಕೊಂಡಿದ್ದಾರೆ. ಕ್ರೀಡೆಜೀವನದ ಅವಿಭಾಜ್ಯ ಅಂಗ. ಯಾವುದೇ ಹಿಂಜರಿಕೆಯಿಲ್ಲದೆ ಸ್ಫರ್ಧೆಗಳಲ್ಲಿ ಭಾಗವಹಿಸಬೇಕು ಎಂದರು.
ಪುರುಷರ 8 ಕಿ.ಮೀ ರಸ್ತೆ ಓಟದ ಸ್ಫರ್ಧೆಯಲ್ಲಿ ಶಿವಾಜಿ ಪಿ.ಎಂ. ಪ್ರಥಮ ಸ್ಥಾನ ಪಡೆದುಕೊಂಡರು. ದ್ವೀತಿಯ ಸ್ಥಾನವನ್ನು ಎಸ್ ರಾಹುಲ್, ತೃತೀಯ ಸ್ಥಾನವನ್ನು ಎಂ.ನಂಜುಂಡಪ್ಪ, ನಾಲ್ಕನೆ ಸ್ಥಾನವನ್ನು ಲಕ್ಮೀಶ ಪಡೆದುಕೊಂಡರು. ಐದನೇ ಬಹುಮಾನ ನವೀನ್, ಆರನೇ ಸ್ಥಾನ ಸಾಹಿಲ್ ಪಡೆದರು.
ಮಹಿಳೆಯರ 6 ಕಿ.ಮೀ ರಸ್ತೆ ಓಟದ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಅರ್ಚನ ಕೆ.ಎಂ., ದ್ವಿತೀಯ ಸ್ಥಾನ ಶಾಹಿನ್ ಎಸ್.ಡಿ., ತೃತೀಯ ಸ್ಥಾನ ಚೈತ್ರಾ ದೇವಾಡಿಗ, ನಾಲ್ಕನೇ ಬಹುಮಾನವನ್ನು ಉಷಾ ಆರ್, ಐದನೇ ಸ್ಥಾನ ಪ್ರಣತಿ, ಆರನೇ ಸ್ಥಾನ ಚೈತ್ರ ಪಿ. ಪಡೆದರು. ಸ್ಪರ್ಧೆಯಲ್ಲಿ ಹಿರಿಯ ನಾಗರಿಕರಾದ ಸಿದ್ದಲಿಂಗಯ್ಯ (56), ಉಮಾಪತಿ(70) ಭಾಗವಹಿಸಿ ಕ್ರೀಡಾ ಉತ್ಸಾಹ ಹೆಚ್ಚಿಸಿದರು.
ಕುಮಾರ ಆಸ್ಪತ್ರೆಯ ವೈದ್ಯ ಡಾ.ಶ್ರೀಧರ್, ರೋಟರಿ ಸಂಸ್ಥೆ ಅಧ್ಯಕ್ಷ ಅಶೋಕ್, ನಗರಸಭೆ ಉಪಾಧ್ಯಕ್ಷ ಸೊಪ್ಪು ಗಣೇಶ್, ಎಪಿಎಂಸಿ ಉಪಾಧ್ಯಕ್ಷ ತರಕಾರಿ ನಾಗರಾಜು, ನಿರ್ದೇಶಕ ಬಸವರಾಜು, ಕಲ್ಪತರು ವಿದ್ಯಾಸಂಸ್ಥೆ ಖಜಾಂಚಿ ಟಿ.ಎಸ್.ಶಿವಪ್ರಸಾದ್, ಕಾರ್ಯದರ್ಶಿ ಎಂ.ಆರ್.ಸಂಗಮೇಶ್, ನಗರಸಭೆ ಸದಸ್ಯರಾದ ಡಾ.ಓಹಿಲಾ ಗಂಗಾಧರ್, ಆಶ್ರಿಫಾ ಬಾನು, ಭಾರತಿ ಮಂಜುನಾಥ್, ನಗರಠಾಣೆ ಸಬ್ಇನ್ಸ್ಪೆಕ್ಟರ್ ದ್ರಾಕ್ಷಾಯಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.