ಚಿಕ್ಕನಾಯಕನಹಳ್ಳಿ: ಫೆ. 6ರಿಂದ 11ರವರೆಗೆ ನಡೆಯಲಿರುವ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ನಿಮಿತ್ತ ಭಾನುವಾರ ಸಂಜೆ ಪಟ್ಟಣಕ್ಕೆ ಆಗಮಿಸಿದ ರಥಯಾತ್ರೆಯನ್ನು ಸ್ಥಳೀಯ ವೀರಶೈವ ಲಿಂಗಾಯತ ಸಮುದಾಯದ ಭಕ್ತರು ಬರಮಾಡಿಕೊಂಡರು.
ಪಟ್ಟಣದ ನೆಹರು ವೃತ್ತದಲ್ಲಿ ರಥವನ್ನು ಸ್ವಾಗತಿಸಿದ ಭಕ್ತರು, ರಥದ ಮುಂದೆ ಅಳವಡಿಸಿದ್ದ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಪುತ್ಥಳಿಗೆ ಪೂಜೆ ಸಲ್ಲಿಸಿದರು. ಸುತ್ತೂರು ಮಠಕ್ಕೆ ಕಾಣಿಕೆ ಸಮರ್ಪಿಸಿದರು.
ಯಡಿಯೂರು, ತುಮಕೂರಿಗೆ ಭೇಟಿ ನೀಡಿ ಚಿಕ್ಕನಾಯಕನಹಳ್ಳಿಗೆ ಆಗಮಿಸಿದೆ. ನಂತರ ಅರಸೀಕೆರೆ ಮೂಲಕ ಹಾಸನ ಜಿಲ್ಲೆ ಪ್ರವೇಶಿಸಲಿದೆ ಎಂದು ಯಾತ್ರೆ ಜತೆ ಬಂದಿದ್ದ ರಥೋತ್ಸವದ ಸಂಚಾಲಕ ಪಂಚಾಕ್ಷರಿ ತಿಳಿಸಿದರು.
ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಸವರಾಜ್ ಹೊನ್ನೇಬಾಗಿ, ಮಲ್ಲಿಕಾರ್ಜುನಸ್ವಾಮಿ, ಗೋವಿಂದರಾಜು, ಶಿವಕುಮಾರಸ್ವಾಮಿ, ಸೋಮಣ್ಣ ಹಾಜರಿದ್ದರು.