ತುರುವೇಕೆರೆ: ರಾಜ್ಯದಲ್ಲಿ ಉತ್ತಮ ಮಳೆಯಾಗುತಿದ್ದು, ಹೇಮಾವತಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರಿನ ಒಳ ಹರಿವು ಬರುತ್ತಿದೆ. ಈ ಬಾರಿ ತಾಲ್ಲೂಕಿನ ಎಲ್ಲ ಕೆರೆಕಟ್ಟೆಗಳಿಗೆ ಹಂತಹಂತವಾಗಿ ನಾಲಾ ನೀರನ್ನು ಹರಿಸುವ ಮೂಲಕ ಅಂರ್ತರ್ಜಲ ಹೆಚ್ಚಿಸಲಾಗುವುದು ಎಂದು ಶಾಸಕ ಮಸಾಲ ಜಯರಾಂ ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಕಡೇಹಳ್ಳಿ- ಮುದ್ದನಹಳ್ಳಿ ರಸ್ತೆಯ ಕೆ.ಮೇಲನಹಳ್ಳಿಯಿಂದ ಹೊಂಗೆಲಕ್ಷ್ಮಿ ಕ್ಷೇತ್ರದ ಗಡಿಯವರೆಗಿನ ₹1 ಕೋಟಿ ವೆಚ್ಚದ ಡಾಂಬರ್ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತಾಲ್ಲೂಕಿನಾದ್ಯಂತ 50 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಗ್ರಾಮದ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದರು.
ಕೋವಿಡ್ನಿಂದ ಕೆಎಸ್ಆರ್ಟಿಸಿ, ವೈದ್ಯರು ಹೀಗೆ ಅನೇಕ ನೌಕರರಿಗೆ ಸಕಾಲಕ್ಕೆ ಸಂಬಳ ಕೊಡುವುದಕ್ಕೆ ಆಗುತ್ತಿಲ್ಲ. ಹೀಗಿರುವಾಗ ಸರ್ಕಾರದಿಂದ ಅನುದಾನ ತರುವುದೇ ಸವಾಲಾಗಿದೆ. ಆದಾಗ್ಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುರುವೇಕೆರೆ ಕ್ಷೇತ್ರದ ಅಭಿವೃದ್ಧಿಗೆ ಸಾವಿರ ಕೋಟಿ ಅನುದಾನ ನೀಡಿದ್ದಾರೆ ಎಂದರು.
ನೆರಿಗೇಹಳ್ಳಿ, ಮುದ್ದನಹಳ್ಳಿ ಹೀಗೆ ಕ್ಷೇತ್ರದ ಗಡಿಭಾಗದ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದರು.
ಇದೇ ವೇಳೆ ಗ್ರಾಮಸ್ಥರು ಮುದ್ದನಹಳ್ಳಿಕೆರೆಗೆ ಹೇಮಾವತಿ ನಾಲಾ ನೀರನ್ನು ಹರಿಸುವಂತೆ ಮನವಿ ಮಾಡಿದರು.