ತುರುವೇಕೆರೆ (ತುಮಕೂರು ಜಿಲ್ಲೆ): ಅನರ್ಹರು ಮೈತ್ರಿ ಸರ್ಕಾರದಿಂದ ಹೊರ ಬಂದಿದ್ದಕ್ಕೆ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅವರಿಗೆ ಅನ್ಯಾಯ ಮಾಡುವುದಿಲ್ಲ. ಅವರು ಹೇಳಿದಂತೆ ನಾವು ಬೆಂಬಲ ಕೊಡುತ್ತೇವೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ವಿರಕ್ತ ಮಠದ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಪಟ್ಟಾಧಿಕಾರದ ರಜತ ಮಹೋತ್ಸವದಲ್ಲಿ ಭಾಗವಹಿಸಲು ಬಂದಿದ್ದ ಅವರು ವರದಿಗಾರರೊಂದಿಗೆ ಮಾತನಾಡಿದರು.
ಅನರ್ಹರು ಹೇಗೆ ಹೇಳುತ್ತಾರೋ, ಆ ದಿಕ್ಕಿನಲ್ಲಿ ಬೆಂಬಲ ಕೊಡುತ್ತೇವೆ. ಅವರ ಕುರಿತು ಸುಪ್ರೀಂಕೋರ್ಟ್ನಲ್ಲಿ ಏನು ತೀರ್ಪು ಬರುತ್ತದೆ ಎಂಬುದು ಗೊತ್ತಿಲ್ಲ. ನಮಗೆ ಒಳ್ಳೆಯದು ಆಗುತ್ತದೆಂಬ ನಿರೀಕ್ಷೆ ಇದೆ ಎಂದು ಹೇಳಿದರು.
ದೇವೇಗೌಡರು ಬಿಜೆಪಿಗೆ ಬೆಂಬಲ ಕೊಡುವ ರೀತಿಯಲ್ಲಿ ಮಾತನಾಡುತ್ತಿದ್ದಾರಲ್ಲ ಎಂಬ ಮಾತಿಗೆ, ಯಾರೇ ಬೆಂಬಲ ಕೊಡಲು ಬಂದರೂ ನಾವು ಬೇಡ ಅನ್ನುವುದಿಲ್ಲ, ತೆಗೆದುಕೊಳ್ಳುತ್ತೇವೆ ಎಂದು ಪ್ರತಿಕ್ರಿಯಿಸಿದರು.
ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ಬಗ್ಗೆ ಕೇಳಿದಾಗ, ಶಿವಸೇನೆ ಅವರು ಸಿ.ಎಂ., ಪಿ.ಎಂ. ಸ್ಥಾನ ಕೇಳ್ತಾರೆ, ನಾವೇನು ಮಾಡೋಣ. ಇಂತಹ ವಿಷಯಗಳನ್ನು ಕೇಂದ್ರದ ನಾಯಕರು ಚರ್ಚೆ ಮಾಡಿ, ತೀರ್ಮಾನಕ್ಕೆ ಬರುತ್ತಾರೆ ಎಂದು ಉತ್ತರಿಸಿದರು.
ಸನ್ಯಾಸ ಆಚರಣೆ ದೊಡ್ಡ ಸಾಧನೆ
‘ನಾವು ಸಂಸಾರಸ್ತರು ಹೆಂಡ್ತಿನ ಬಿಟ್ಟು ಒಂದು ವಾರ ಇರಲ್ಲ. ಸ್ವಾಮೀಜಿ 25 ವರ್ಷ ಸನ್ಯಾಸ ಅನುಚರಿಸಿ, ಆಚರಿಸಿ, ರಜತ ಮಹೋತ್ಸವ ಗೌರವಕ್ಕೆ ಭಾಜನರಾಗಿದ್ದಾರೆ. ನಿಜಕ್ಕೂ ಇದು ಮಹತ್ ಸಾಧನೆ’ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ ಸಚಿವ ಕೆ.ಎಸ್.ಈಶ್ವರಪ್ಪ ಶ್ಲಾಘಿಸಿದರು.
ಇಲ್ಲಿನ ವಿರಕ್ತ ಮಠದ ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಪಟ್ಟಾಧಿಕಾರದ ರಜತ ಮಹೋತ್ಸವದ ಧರ್ಮಸಭೆಯಲ್ಲಿ ಮಾತನಾಡಿ,ಪೂಜ್ಯರು ನಿತ್ಯ ಬೆಳಿಗ್ಗೆ 4ರಿಂದರಾತ್ರಿ 11ರವರೆಗೂಶರೀರಕ್ಕೆ ಹಲವಾರು ತೊಂದರೆ ಕೊಟ್ಟು ಉಪವಾಸ, ತಪಸ್ಸುಗಳನ್ನು ಮಾಡಿದ್ದಾರೆ. ಅವರು ತ್ಯಾಗಿಗಳು, ನಾವು ಭೋಗಿಗಳು. ನಾವು ಎಲ್ಲ ಆನಂದ ಕಾಣುತ್ತೇವೆ. ಆದರೂ, ಇನ್ನಷ್ಟು ಆನಂದ ನಮ್ಮದಾಗಲಿ ಎಂದು ಸ್ವಾಮೀಜಿ ಹಾರೈಸುತ್ತಾರೆ. ಅದು ಅವರ ದೊಡ್ಡಗುಣ’ ಎಂದರು.
ನಾವು ಪ್ರತಿಬಾರಿ ಸ್ವಾಮೀಜಿ ದರ್ಶನಕ್ಕೆ ಬಂದಾಗ ನನ್ನ ಮಗಳಿಗೆ ಒಳ್ಳೆ ಗಂಡು ಸಿಗಲಿ, ಮಗನಿಗೆ ಒಳ್ಳೆದಾಗಲಿ, ಎಲೆಕ್ಷನ್ ನಲ್ಲಿ ಗೆಲುವು ನಮ್ಮದಾಗಲಿ ಎಂದು ಬೇಡಿಕೊಳ್ಳುತ್ತೇವೆ. ಆದರೆ, ಈ ರಜತ ಮಹೋತ್ಸವದಲ್ಲಿ ಸ್ವಾಮೀಜಿ ನಮ್ಮೊಂದಿಗೆ ದೀರ್ಘಕಾಲ ಇರಲಿ. ಸಮಾಜವನ್ನು ಮತ್ತಷ್ಟು ಉದ್ಧಾರ ಮಾಡಲಿ ಎಂದು ಬೇಡಿಕೊಳ್ಳಬೇಕು ಎಂದು ಹೇಳಿದರು.
ನಾವು ನಮ್ಮ ಮದುವೆಯ 25ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತೇವೆ. ಅದು ನಮ್ಮ ವೈಯಕ್ತಿಕ ಸಂತೋಷಕ್ಕಾಗಿ. ಇಂತಹ ಉತ್ಸವಗಳು ಸಮಾಜದ ಒಳಿತಿಗಾಗಿ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.