ಪಾವಗಡ: ತಾಲ್ಲೂಕಿನ ನೇರಳೆಕುಂಟೆ ಗ್ರಾಮದಲ್ಲಿ ಪತ್ನಿಯನ್ನು ಹತ್ಯೆ ಮಾಡಿ ಮನೆಯ ಬಳಿ ಶವ ಹೂತಿಟ್ಟಿದ್ದ ಪ್ರಕರಣ ಭಾನುವಾರ ಬೆಳಕಿಗೆ ಬಂದಿದೆ.
ಶಿವಮೊಗ್ಗ ಜಿಲ್ಲೆಯ ಜ್ಯೋತಿ (28) ಮೃತರು. ಆರೋಪಿ ಮಾರುತಿ (22) ಪರಾರಿಯಾಗಿದ್ದಾನೆ. ವರ್ಷದ ಹಿಂದೆ ಜ್ಯೋತಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಈ ಹಿಂದೆ ತುಮಕೂರಿನಲ್ಲಿ ನೀರು ಸರಬರಾಜು ಮಾಡುವ ಟ್ಯಾಂಕರ್ನ ಚಾಲಕನಾಗಿದ್ದ. ವಿವಾಹದ ನಂತರ ಪತ್ನಿಯನ್ನು ಗ್ರಾಮಕ್ಕೆ ಕರೆತಂದಿದ್ದ.
ಇಬ್ಬರ ಮಧ್ಯೆ ವಾರದಿಂದ ಜಗಳ ನಡೆಯುತ್ತಿತ್ತು. ಶನಿವಾರ ರಾತ್ರಿಯೂ ಜಗಳವಾಡುತ್ತಿದ್ದ ಶಬ್ದ ನೆರೆಹೊರೆಯ ಮನೆಯವರಿಗೆ ಕೇಳಿಸಿದೆ. ಬೆಳಗ್ಗೆ ಜ್ಯೋತಿ ಮನೆಯಲ್ಲಿ ಇಲ್ಲದಿರುವ ಬಗ್ಗೆ ಅನುಮಾನ ಬಂದು ಅಕ್ಕಪಕ್ಕದ ಮನೆಯವರು ವಿಚಾರಿಸಿದ್ದಾರೆ. ಮನೆಯ ಹತ್ತಿರದ ಮರಳಿಗೆ ಸುಗಂಧ ದ್ರವ್ಯ ಚೆಲ್ಲಿರುವುದು ಅನುಮಾನ ಮೂಡಿಸಿದೆ. ಈ ಬಗ್ಗೆ ಗ್ರಾಮಸ್ಥರು ಕೇಳಿದಾಗ ಮಾರುತಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಶನಿವಾರ ರಾತ್ರಿ ಪತ್ನಿಯನ್ನು ಹತ್ಯೆ ಮಾಡಿ ಮನೆ ಪಕ್ಕದ ಮರಳಿನಲ್ಲಿ ಹೂತಿಟ್ಟಿರಬಹುದು ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಪಟ್ಟಣ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ