ವೈ.ಎನ್.ಹೊಸಕೋಟೆ: ಪಾವಗಡ ತಾಲ್ಲೂಕಿನ 2ನೇ ದೊಡ್ಡ ಪಟ್ಟಣವಾದ ಹೋಬಳಿ ಕೇಂದ್ರವು ಬಹುದಿನಗಳಿಂದ ಪಟ್ಟಣ ಪಂಚಾಯಿತಿಯಾಗುವ ನಿರೀಕ್ಷೆ ಹೊತ್ತಿದೆ.
ಐತಿಹಾಸಿಕವಾಗಿ ಪಾಳೆಗಾರರ ಸಂಸ್ಥಾನ ಕೇಂದ್ರವಾಗಿದ್ದ ಪಟ್ಟಣವು ಸುತ್ತಲೂ 2-3 ಕಿ.ಮೀ ವ್ಯಾಪ್ತಿಯವರೆಗೆ ಪಸರಿಸಿದೆ. ಒಳಕೋಟೆ, ಹೊರಕೋಟೆ, ಹಳೆಪೇಟೆ, ವಿವಿಧ ಬಡಾವಣೆಗಳು ಮತ್ತು ಲೇಔಟ್ ಒಳಗೊಂಡಂತೆ ಒಟ್ಟು ಎಂಟು ವಾರ್ಡ್ಗಳನ್ನು ಹೊಂದಿದೆ. 1954ರಿಂದ ಪುರಸಭೆಯಾಗಿದ್ದು, 1987ರಲ್ಲಿ ಮಂಡಲ ಪಂಚಾಯಿತಿಯಾಗಿ, 1994ರಿಂದ ಗ್ರಾಮ ಪಂಚಾಯಿತಿಯಾಗಿ ಮುಂದುವರೆಯುತ್ತಿದೆ.
2011ರ ಜನಗಣತಿಯಂತೆ 12,593 ಇದ್ದ ಜನಸಂಖ್ಯೆ ಇಂದು 18 ಸಾವಿರದ ಗಡಿ ದಾಟಿದೆ. ನಾಡಕಚೇರಿ, ಸರ್ಕಾರಿ ಆಸ್ಪತ್ರೆ, ಪೊಲೀಸ್ ಠಾಣೆ, ಬೆಸ್ಕಾಂ ಕಚೇರಿ, ವಿದ್ಯುತ್ ಪ್ರಸರಣ ಕೇಂದ್ರ, ಅಂಚೆಕಚೇರಿ, ರೇಷ್ಮೆ ಇಲಾಖೆ, ಕೃಷಿ ಇಲಾಖೆ ಇನ್ನಿತರೆ ಸರ್ಕಾರಿ ಕಚೇರಿಗಳಿದ್ದು, ನಿತ್ಯ ದಟ್ಟಣೆ ಕಂಡುಬರುತ್ತದೆ.
ಸರ್ಕಾರಿ ಮತ್ತು ಖಾಸಗಿಯ ಐದು ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಏಳು ಮಾಧ್ಯಮಿಕ ಶಾಲೆಗಳಿದ್ದು, ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣ ಪಡೆಯುತ್ತಿದ್ದಾರೆ.
ಶೇಂಗಾಬೀಜ ಸುಲಿಯುವ ಸಣ್ಣ ಕೈಗಾರಿಕೆ, ಇಟ್ಟಿಗೆ ಕಾರ್ಖಾನೆ, ರೇಷ್ಮೆ ಕೈಮಗ್ಗ ಮತ್ತು ಪವರ್ ಲೂಮ್ಸ್, ಕಟ್ಟಡ ನಿರ್ಮಾಣ, ಕಂಬಳಿ ನೇಕಾರಿಕೆ ಮತ್ತು ವ್ಯವಸಾಯ ಚಟುವಟಿಗಳು ಸಾವಿರಾರು ಸಂಖ್ಯೆಯ ಉದ್ಯೋಗವನ್ನು ಸೃಷ್ಟಿಸುತ್ತಿವೆ. ಗಡಿಭಾಗದ ಉದ್ಯೋಗ ವಲಯವಾಗಿರುವ ಈ ಪಟ್ಟಣಕ್ಕೆ ದಿನೇ ದಿನೇ ವಲಸಿಗರ ಒಳಹರಿವು ಹೆಚ್ಚಾಗಿದ್ದು, ಮೂಲ ಸೌಲಭ್ಯಗಳ ಪೂರೈಕೆ ಸವಾಲಾಗಿ ಪರಿಣಮಿಸಿದೆ.
ಕಿರಾಣಿ, ಬಟ್ಟೆ, ಕಟ್ಟಡ ನಿರ್ಮಾಣ ವಸ್ತು, ಬೆಳ್ಳಿ-ಬಂಗಾರ ಆಭರಣ, ಗೃಹಪಯೋಗಿ ವಸ್ತು, ದ್ವಿಚಕ್ರ ವಾಹನ, ರೇಷ್ಮೆಸೀರೆ ಇತ್ಯಾದಿಗಳ ವ್ಯಾಪಾರ ಪ್ರಧಾನವಾಗಿದ್ದು, ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ರಾಷ್ಟ್ರೀಕೃತ, ಖಾಸಗಿ, ಸಹಕಾರಿ ಬ್ಯಾಂಕ್ ಹಣಕಾಸಿನ ವ್ಯವಹಾರಕ್ಕೆ ಪೂರಕವಾಗಿವೆ. ನಿತ್ಯ 50-60 ಬಸ್ ಸಂಚಾರವಿದ್ದು, ಆಂಧ್ರಪ್ರದೇಶದ ಹಲವು ಹಳ್ಳಿಗಳು ಸೇರಿದಂತೆ ಸುತ್ತಮುತ್ತಲಿನ ಜನರಿಗೆ ಸಂತೆ ಮತ್ತು ವ್ಯಾಪಾರ ವ್ಯವಹಾರಗಳಿಗೆ ಇದೇ ಕೇಂದ್ರಸ್ಥಾನ.
ಹಳೆ ಪಟ್ಟಣದಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ರಸ್ತೆಗಳ ಒತ್ತುವರಿ ಅನಿಯಂತ್ರಿತವಾಗಿದೆ. ಪುರಬೀದಿಗಳು ಮತ್ತು ದೊಡ್ಡ ರಸ್ತೆಗಳು ಗಲ್ಲಿಗಳಾಗುತ್ತಿದ್ದು, ಸಂಚಾರ ದುಸ್ತರವಾಗಿದೆ.
ಮೂರು ಸಾವಿರಕ್ಕೂ ಅಧಿಕ ಕುಟುಂಬಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿಯಲ್ಲಿ 32 ಸದಸ್ಯರಿದ್ದಾರೆ. ನೆಲಬಾಡಿಗೆ, ಮಳಿಗೆ ಬಾಡಿಗೆ, ಮನೆ ಕಂದಾಯ, ನೀರಿನ ಕಂದಾಯ, ತೆರಿಗೆ, ಪರವಾನಗಿ ಇನ್ನಿತರೆ ಮೂಲದಿಂದ ₹12 ಲಕ್ಷ ಮಾಸಿಕ ಆದಾಯವಿದೆ. ಪಟ್ಟಣ ದೊಡ್ಡದಾಗಿರುವುದರಿಂದ ಸರ್ಕಾರ ನಿಗದಿಗಿಂತ ಅಧಿಕ ಸಂಖ್ಯೆಯಲ್ಲಿರುವ ಸಿಬ್ಬಂದಿ ಮತ್ತು ಅಸಮರ್ಪಕ ಕಂದಾಯ ವಸೂಲಾತಿಯಿಂದಾದ ಆದಾಯ ಸಂಗ್ರಹದಲ್ಲಿ ಬಹುಪಾಲು ವೇತನಕ್ಕೆ ವ್ಯಯವಾಗುತ್ತಿದೆ. ಪಟ್ಟಣದ ಪ್ರಗತಿ ಕಾರ್ಯಗಳಿಗೆ ಹಣಕಾಸಿನ ಕೊರತೆ ಸದಾ ಕಾಡುತ್ತಿದೆ.
ಇಂತಹ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರವಾಗಿ ಗ್ರಾಮ ಪಂಚಾಯಿತಿಯು ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಯಾಗಲೇಬೇಕು ಎನ್ನುವುದು ಜನರ ಬಹುದಿನದ ಬೇಡಿಕೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.