ಜಾಹೀರಾತು ಜಗತ್ತು ಅಪೇಕ್ಷಿಸುವ ಆಕರ್ಷಕ ಐಡಿಯಾಗಳು, ಪದವಿನ್ಯಾಸ ಹಾಗೂ ಹೊಸತನಗಳು ಅಲ್ಲಿ ಹಾಸುಹೊಕ್ಕಿದ್ದವು. ನವನವೀನ ಆಭರಣ, ಕಾಟನ್ ಬ್ಯಾಗ್ಗಳು ಹಾಗೂ ವೈವಿಧ್ಯಮಯ ಗಡಿಯಾರಗಳ ವಿನ್ಯಾಸಗಳು ಹೊಸತೊಂದು ಲೋಕ ಸೃಷ್ಟಿಸಿದವು.
–ಇದು ತುಮಕೂರು ವಿಶ್ವವಿದ್ಯಾನಿಲಯದ ಡಾ.ಎಂ.ಎಸ್.ಸುಬ್ಬಲಕ್ಷ್ಮಿ ಲಲಿತ ಕಲಾ ವಿಭಾಗದಲ್ಲಿ ನಡೆದ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನದಲ್ಲಿ ಕಂಡ ಹೊಸ ಬಗೆಯ ಲೋಕ.
‘ಅನಂತ ಆಕಾಶಕ್ಕೆ ಅಪರಿಮಿತ ಬಣ್ಣ ’ ಪರಿಕಲ್ಪನೆ ಹೊತ್ತಿದ್ದ ಕಲಾ ಪ್ರದರ್ಶನ ಅಕ್ಷರದ ಹಂಗಿಲ್ಲದೇ ಹೊಸ ದೃಶ್ಯ ಜಗತ್ತಿನ ಅನುಭವ ತೆರೆದಿಟ್ಟಿದ್ದು ನೋಡುಗರನ್ನು ಚಕಿತಗೊಳಿಸಿತು.
ವರ್ಷವಿಡೀ ಕ್ಯಾನ್ವಾಸ್, ಬಣ್ಣ, ರೇಖಾ ವಿನ್ಯಾಸಗಳಲ್ಲಿ ತನ್ಮಯರಾಗಿದ್ದ ವಿದ್ಯಾರ್ಥಿಗಳು ಸೆಮಿಸ್ಟರ್ನ ಅಂತ್ಯದಲ್ಲಿ ತಾವೇ ಬರೆದ ಕಲಾಕೃತಿಗಳ ಪ್ರದರ್ಶನ ಕಂಡು ಪುಳಕಿಗೊಂಡರು. ಆಕಾಶದ ಅನಂತ ಕ್ಯಾನ್ವಾಸ್ನಲ್ಲಿ ಮೋಡಗಳು ಕ್ಷಣಕ್ಷಣಕ್ಕೂ ಬಹುರೂಪ ತಾಳುವ ದೃಶ್ಯ ಕಾವ್ಯದಂತೆ ಇಲ್ಲಿಯೂ ವಿದ್ಯಾರ್ಥಿಗಳು ಅಪರಿಮಿತ ಬಣ್ಣಗಳ ವಿನ್ಯಾಸದಲ್ಲಿ ದೃಶ್ಯಕಾವ್ಯ ಸೃಷ್ಟಿಸಿದರು.
ಪ್ರದರ್ಶನದ ಅತಿಥಿಯಾಗಿದ್ದ ಖ್ಯಾತ ಕಲಾವಿದ ಎಂ.ಎಸ್. ಮೂರ್ತಿ ಅವರು ತಮ್ಮ ‘ದೃಶ್ಯ’ ಕಾದಂಬರಿ ಪ್ರದರ್ಶಿಸಿದರು. ಲಲಿತ ಕಲಾ ವಿಭಾಗದ ಅಪ್ಲೈಡ್ ಆರ್ಟ್ ವಿದ್ಯಾರ್ಥಿಗಳು ಮಾರುಕಟ್ಟೆ ಸೆಳೆಯುವಂಥ ವಿನೂತನ ಉತ್ಪನ್ನಗಳನ್ನು ಸೃಜಿಸಿ ಕಲಾತ್ಮಕವಾಗಿ ಸಂಯೋಜಿಸಿದ್ದು ವಿಶೇಷವಾಗಿತ್ತು ಎಂದು ವಿಭಾಗದ ಮುಖ್ಯಸ್ಥೆ ಡಾ. ಗೀತಾ ವಸಂತ್ಭಟ್ ಪ್ರತಿಕ್ರಿಯಿಸಿದರು.