ಉಡುಪಿ: ಮಂಗಳೂರಿನಲ್ಲಿ ದುಷ್ಕರ್ಮಿ ಗಳಿಂದ ಹಲ್ಲೆಗೆ ಒಳಗಾಗಿ ಮೃತಪಟ್ಟ ಅಹಮ್ಮದ್ ಬಶೀರ್ ಕುಟುಂಬಕ್ಕೆ ರಾಜ್ಯ ಸರ್ಕಾರ ₹ 50 ಲಕ್ಷ ಪರಿಹಾರ ನೀಡ ಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.
ಇಲ್ಲಿ ಭಾನುವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಕೊಲೆ ನಡೆಯುತ್ತಿವೆ. ಬಶೀರ್ ಅವರ ಆತ್ಮಕ್ಕೆ ಚಿರಶಾಂತಿ ಹಾಗೂ ಕುಟುಂಬಕ್ಕೆ ಆ ದುಃಖವನ್ನು ಸಹಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದರು.
‘ಎಲ್ಲ ಪ್ರಾಣಗಳಿಗೆ ಬೆಲೆಯಿದೆ. ಎಲ್ಲರಿಗೂ ಬದುಕುವ ಮತ್ತು ಬದುಕಿ ಸುವ ಹಕ್ಕಿದೆ. ಯಾರನ್ನೇ ಆಗಲಿ ಕೊಲ್ಲುವ ಹಕ್ಕು ಯಾರಿಗೂ ಇಲ್ಲ. ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದೆ, ಇಂತಹ ಕೃತ್ಯಗಳಿಗೆ ಕಡಿವಾಣ ಹಾಕದ ಕಾರಣ ಜಿಲ್ಲೆಯಲ್ಲಿ ಅಮಾಯಕ ಜನರ ಪ್ರಾಣ ಹಾನಿಯಾಗುತ್ತಿದೆ. ಪೊಲೀಸ್ ಇಲಾಖೆ ದುರ್ಬಲವಾದ ಕಾರಣ ದರೋಡೆಕೋರರು, ಗೂಂಡಾಗಳು, ಮತಾಂಧ ಶಕ್ತಿಗಳು ಎಚ್ಚೆತ್ತುಕೊಂಡಿವೆ’ ಎಂದು ದೂಷಿಸಿದರು.
ಕರಾವಳಿ ಸಹಿತ ರಾಜ್ಯದಲ್ಲಿ ನಡೆ ಯುತ್ತಿರುವ ಈ ಕೃತ್ಯಗಳಿಗೆ ಸರ್ಕಾರದ ವೈಫಲ್ಯಕ್ಕೆ ನೇರ ಕಾರಣ. ಆದರೆ, ಈ ಬಗ್ಗೆ ಮುಖ್ಯಮಂತ್ರಿಯಾಗಲಿ ಗೃಹ ಸಚಿವರು ತಲೆಕೆಡಿಸಿಕೊಂಡಿಲ್ಲ. ಕರಾವಳಿಯ ಜನರಿಗೆ ಧೈರ್ಯ ತುಂಬುವ ಬದಲು ಇನ್ನೊಂದು ಸಮಾಜ, ವರ್ಗವನ್ನು ದೂರಿ, ಸಮಾವೇಶಗಳನ್ನು ನಡೆಸಿ ಜನರ ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿದೆ ಎಂದು ದೂರಿದರು.
ಮಾಜಿ ಶಾಸಕ ಕೆ.ರಘಪತಿ ಭಟ್, ನಗರಸಭಾ ಸದಸ್ಯ ಯಶಪಾಲ್ ಸುವರ್ಣ, ಪ್ರಭಾಕರ ಪೂಜಾರಿ, ಶ್ಯಾಮಲ ಕುಂದರ್, ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಪ್ರವೀಣ್ ಕಪ್ಪೆಟ್ಟು, ಬಾಲಕೃಷ್ಣ ಉಪಸ್ಥಿತರಿದ್ದರು.
ಪ್ರವಾಸ ಯಾವ ರೀತಿಯದ್ದು?
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸ ಕೈಗೊಂಡಲ್ಲಿ ಯಾಕೆ ಹತ್ಯೆಯಾಗಬೇಕು? ಹಿಂದೆ ಮಂಗಳೂರಿಗೆ ಬಂದಾಗ ಶರತ್ ಮಡಿವಾಳ, ಹೊನ್ನಾವರದಲ್ಲಿ ಪರೇಶ್ ಮೇಸ್ತ, ಈಗ ಮಂಗಳೂರಿಗೆ ಬರುವಾಗ ಬಶೀರ್, ಎರಡು ದಿನಗಳ ಹಿಂದೆ ದೀಪಕ್ ರಾವ್ ಹತ್ಯೆಯಾಗಿದೆ. ಮುಖ್ಯಮಂತ್ರಿ ಭೇಟಿ ನೀಡಿದ ಸ್ಥಳಗಳಲ್ಲಿ ಕೊಲೆ ನಡೆಯುತ್ತಿದೆ ಎಂದರೆ ಅವರ ಪ್ರವಾಸ ಯಾವ ರೀತಿಯದ್ದು ಎಂದು ಅರಿವಾಗುತ್ತದೆ ಎಂದು ಸಂಸದರು ಟೀಕಿಸಿದರು.