ಪಡುಬಿದ್ರಿ: ಅದಾನಿ ಫೌಂಡೇಷನ್ನ ಶೇ.43ರಷ್ಟು ಸಿಎಸ್ಆರ್ ಅನುದಾನವನ್ನು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗಿಸಲಾಗಿದ್ದು, ಶಿಕ್ಷಣ ಕ್ಷೇತ್ರಕ್ಕೆ ಶೇ.16 ಮತ್ತು ಆರೋಗ್ಯ ಕ್ಷೇತ್ರಕ್ಕೆ ಶೇ.18ರಷ್ಟು ವಿನಿಯೋಗಿಸಲಾಗುತ್ತಿದೆ ಎಂದು ಅದಾನಿ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ ತಿಳಿಸಿದರು.
ಅದಾನಿ ಒಡೆತನದ ಯುಪಿಸಿಎಲ್ ಸಂಸ್ಥೆಯ ಸಿಎಸ್ಆರ್ ಯೋಜನೆಯನ್ನು ನಿರ್ವಹಿಸುತ್ತಿರುವ ಅಂಗಸಂಸ್ಥೆ ಅದಾನಿ ಫೌಂಡೇಷನ್ನ ವತಿಯಿಂದ ತೆಂಕ ಗ್ರಾಮ ಪಂಚಾಯಿತಿ ವಾಪ್ತಿಯಲ್ಲಿ 3 ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ತೆಂಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫಿಷರೀಸ್ ರಸ್ತೆಯ ಅಭಿವೃದ್ಧಿ, ನಾರಾಯಣಗುರು ಮಂದಿರ ಸಭಾಂಗಣದ ಆವರಣಕ್ಕೆ ಚಾವಣಿ ಅಳವಡಿಕೆ, ವೀರಭದ್ರ ದೇವಾಸ್ಥಾನದ ಆವರಣದ ನೆಲಕ್ಕೆ ಕಾಂಕ್ರೀಟ್ ಹಾಸುಗಲ್ಲಿನ ನಿರ್ಮಾಣ ಕಾಮಗಾರಿಗಳಿಗೆ ₹15.50 ಲಕ್ಷ ವೆಚ್ಚದಲ್ಲಿ ಅದಾನಿ ಫೌಂಡೇಷನ್ ಗ್ರಾಮೀಣ ಮೂಲಸೌಕರ್ಯ ಕಾರ್ಯಕ್ರಮದಡಿಯಲ್ಲಿ ಕೈಗೆತ್ತಿಕೊಂಡಿದೆ. ತೆಂಕ ಗ್ರಾಮ ಪಂಚಾಯಿತಿ 2023–24ರ ವಾರ್ಷಿಕ ಸಾಲಿನಲ್ಲಿ ನೀಡಿದ ಕ್ರಿಯಾಯೋಜನೆ ಮೇರೆಗೆ ತನ್ನ ಸಿಎಸ್ಆರ್ ಯೋಜನೆಯಡಿಯಲ್ಲಿ ಈ ಕಾಮಗಾರಿಗಳನ್ನು ನಿರ್ವಹಿಸಲು ಮುಂದಾಗಿದೆ.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪ್ರವೀಣ್, ಕಾರ್ಯದರ್ಶಿ ಗಾಯತ್ರಿ, ಮಾಜಿ ಅಧ್ಯಕ್ಷೆ ಅರುಣಾ ಕುಮಾರಿ, ಸದಸ್ಯರಾದ ಬಾಲಚಂದ್ರ, ದೀಪಕ್ ಎರ್ಮಾಳ್, ಸ್ಥಳೀಯ ನಿವಾಸಿಗಳು, ಗುತ್ತಿಗೆದಾರ ಡೇವಿಡ್ ಡಿಸೋಜ, ಅದಾನಿ ಸಂಸ್ಥೆಯ ಎಜಿಎಂ ರವಿ ಆರ್.ಜೇರೆ, ಅದಾನಿ ಫೌಂಡೇಷನ್ ಸಿಬ್ಬಂದಿ ಅನುದೀಪ್ ಇದ್ದರು.