ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಕಾಲ ಬದಲಾದರೂ ಬದಲಾಗದ ಅಂಬಾಸಿಡರ್ ಕಾರು

ಧಾರ್ಮಿಕ ಕಾರ್ಯಕ್ರಮಗಳಿಗೆ ಹಳೆಯ ಕಾರಿನಲ್ಲೇ ಪ್ರಯಾಣಿಸುವ ಕೃಷ್ಣಾಪುರ ಮಠದ ಯತಿಗಳು
Last Updated 16 ಜನವರಿ 2022, 19:30 IST
ಅಕ್ಷರ ಗಾತ್ರ

ಉಡುಪಿ: ‘ಮಠಾಧೀಶರು’ ಎಂಬ ಪದಕ್ಕೆ ಅನ್ವರ್ಥದಂತೆ ಬದುಕುತ್ತಿರುವ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು ಐಶಾರಾಮಿ ಹಾಗೂ ಭೋಗದ ವಸ್ತುಗಳತ್ತ ತಿರುಗಿಯೂ ನೋಡಿಲ್ಲ. ಸರಳತೆಯನ್ನೇ ಮೈಗೂಡಿಸಿಕೊಂಡು ಜೀವಿಸುತ್ತಿರುವ ವಿದ್ಯಾಸಾಗರ ತೀರ್ಥರು ಇಂದಿಗೂ ಉಪಯೋಗಿಸುವುದು 1973ರ ಅಂಬಾಸಿಡರ್ ಕಾರು.

ಎಂಇಜಿ 653 ನೋಂದಣಿ ಸಂಖ್ಯೆಯ ಅಂಬಾಸಿಡರ್‌ ಕಾರು ಕಳೆದ 48 ವರ್ಷಗಳಿಂದಲೂ ಕೃಷ್ಣಾಪುರ ಮಠದ ಶ್ರೀಗಳನ್ನು ಹೊತ್ತು ಸಾಗುತ್ತಿದೆ. ಕಾಲ ಬದಲಾದರೂ ಶ್ರೀಗಳು ಕಾರು ಬದಲಿಸಿಲ್ಲ. ಬದಲಾಗಿ ಕಾಲಕಾಲಕ್ಕೆ ಕಾರನ್ನು ಸರ್ವೀಸ್‌ ಮಾಡಿಸಿ ಇಂದಿಗೂ ಸುಸ್ಥಿತಿಯಲ್ಲಿರಿಸಿದ್ದಾರೆ.

ಕೃಷ್ಣಾಪುರ ಶ್ರೀಗಳು ಸಭೆ, ಸಮಾರಂಭ, ಪ್ರವಚನ ಹಾಗೂ ಧಾರ್ಮಿಕ ಪ್ರವಾಸಗಳಿಗೆ ಇಂದಿಗೂ ಅಂಬಾಸಿಡರ್ ಕಾರನ್ನೇ ಬಳಸುತ್ತಾರೆ. ಐಶಾರಾಮಿ ಕಾರು ಖರೀದಿಸಬಹುದಲ್ಲವೇ ಎಂಬ ಆಪ್ತರ ಸಲಹೆಗಳು ಆಗಾಗ ಕಿವಿಗೆ ಬಿದ್ದರೂ ಎಂದಿಗೂ ತಲೆಗೆ ಹಾಕಿಕೊಂಡವರಲ್ಲ ಎನ್ನುತ್ತಾರೆ ಶ್ರೀಗಳನ್ನು ಹತ್ತಿರದಿಂದ ಬಲ್ಲವರು.

ಸರಳತೆ, ಸಂಪ್ರದಾಯಗಳ ಪಾಲನೆ, ಧಾರ್ಮಿಕ ವಿಚಾರಗಳ ಅನುಷ್ಠಾನದಲ್ಲಿ ಅಚಲವಾದ ನಂಬಿಕೆಯನ್ನು ಇರಿಸಿರುವ ಶ್ರೀಗಳು ಸಂಪತ್ತಿಗೆ, ಐಶಾರಾಮಿ ವಸ್ತುಗಳ ಬಳಕೆಗೆ ಎಂದೂ ಆಸಕ್ತಿ ತೋರಿದವರಲ್ಲ. ತಂತ್ರಜ್ಞಾನವನ್ನೂ ಬಹಳ ಹತ್ತಿರಕ್ಕೆ ಬಿಟ್ಟುಕೊಂಡಿಲ್ಲ. ಅವರು ಬದುಕಿನ ಹಾದಿಯೇ ಸರಳವಾಗಿದ್ದು, ಲೋಲುಪತೆಗೆ ಅವಕಾಶವೇ ಇಲ್ಲ ಎನ್ನುತ್ತಾರೆ ಆಪ್ತರು.

ಸದ್ಯ ಕೃಷ್ಣಾಪುರ ಮಠದ ಶೆಡ್‌ನಲ್ಲಿರುವ ಡೀಸೆಲ್ ಎಂಜಿನ್‌ ಅಂಬಾಸಿಡರ್‌ ಕಾರು ಕೃಷ್ಣಾಪುರ ಪರ್ಯಾಯದ ಆಕರ್ಷಣೆಗಳಲ್ಲೊಂದು. ಪರ್ಯಾಯಕ್ಕೆ ಬರುತ್ತಿರುವ ಭಕ್ತರು ಕಾರನ್ನು ಕುತೂಹಲದಿಂದ ವೀಕ್ಷಿಸುತ್ತ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ಶಾಸಕರ ತಂದೆ ಕಾರಿನ ಚಾಲಕರು:

ಉಡುಪಿ ಶಾಸಕರಾದ ಕೆ.ರಘುಪತಿ ಭಟ್‌ ಅವರ ತಂದೆಯವರಾದ ಕರಂಬಳ್ಳಿ ಶ್ರೀನಿವಾಸ ಬಾರಿತ್ತಾಯರು ಸುಧೀರ್ಘ ಅವಧಿಗೆ ಕೃಷ್ಣಾಪುರ ಶ್ರೀಗಳ ಕಾರು ಚಾಲಕರಾಗಿದ್ದರು. 5 ದಶಕಗಳ ಕಾಲ ಶ್ರೀಗಳ ಕಾರು ಚಾಲಕರಾಗಿದ್ದವರು ಶ್ರೀನಿವಾಸ ಬಾರಿತ್ತಾಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT