ಕಾರ್ಕಳ: ಉಡುಪಿಯ ಆಯುಷ್ ಇಲಾಖೆ, ತಾಲ್ಲೂಕು ಶಿಕ್ಷಣಾಧಿಕಾರಿ ಕಚೇರಿ ಹಾಗೂ ಆರೋಗ್ಯ ಭಾರತಿ ಆಶ್ರಯದಲ್ಲಿ ಇಲ್ಲಿನ ಕೋರ್ಟ್ ರಸ್ತೆಯಲ್ಲಿರುವ ಸುಂದರ ಪುರಾಣಿಕ ಸ್ಮಾರಕ ಸರ್ಕಾರಿ ಪ್ರೌಢಶಾಲೆ ಪೆರ್ವಾಜೆಯಲ್ಲಿ ಶನಿವಾರ ‘ಬಾಲೋಪಚಾರ’ ಪುಸ್ತಕವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಲೋಕಾರ್ಪಣೆಗೊಳಿಸಿದರು.
ಸುನಿಲ್ ಕುಮಾರ್ ಮಾತನಾಡಿ, ‘ಎಲ್ಲ ವಿದ್ಯಾರ್ಥಿಗಳು ಬಾಲೋಪಚಾರ ಪುಸ್ತಕವನ್ನು ಓದಬೇಕು. ಅದರಲ್ಲಿ ನೀಡಿರುವ ಮಾಹಿತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲೆಯ ಆರೋಗ್ಯ ಭಾರತಿ ಉಪಾಧ್ಯಕ್ಷ ಡಾ. ರಾಮದಾಸ್ ಹೆಗ್ಡೆ ಮಾತನಾಡಿ, ಬ್ರಾಹ್ಮೀ ಮೂಹೂರ್ತದಲ್ಲಿ ಏಳುವುದರಿಂದ, ಉಪವಾಸ, ಯೋಗ, ಧ್ಯಾನ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ’ ಎಂದರು.
ಪುಸ್ತಕ ಪರಿಚಯಿಸಿದ ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ್ ರೆಂಜಾಳ, ‘ವಿದ್ಯಾರ್ಥಿಗಳಿಗೆ ಬೇಕಾದ ಮಾಹಿತಿ ಯನ್ನು ಅತ್ಯಂತ ಸರಳ ವಾಕ್ಯಗಳಲ್ಲಿ ಚೊಕ್ಕದಾಗಿ ಕೈಪಿಡಿಯಲ್ಲಿ ಕೊಡಲಾಗಿದೆ’ ಎಂದರು. ಎಲ್ಲ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ವಿತರಿಸಲಾಯಿತು. ಔಷಧೀಯ ಸಸ್ಯಾರೋಪಣ ಕಾರ್ಯಕ್ರಮ ನಡೆಯಿತು.
ಕಾರ್ಕಳ ತಾಲ್ಲೂಕು ಆರೋಗ್ಯ ಭಾರತಿಯ ಅಧ್ಯಕ್ಷ ಡಾ. ಸತ್ಯನಾರಾಯಣ ಭಟ್, ವಿದ್ಯಾರ್ಥಿಗಳಿಗೆ ಹಲವು ಸಸ್ಯಗಳನ್ನು ನೀಡಿ, ಅದರ ಔಷಧೀಯ ಗುಣಗಳನ್ನು ತಿಳಿಸಿದರು.
ತಾಲ್ಲೂಕು ಆರೋಗ್ಯ ಭಾರತೀಯ ಉಪಾಧ್ಯಕ್ಷೆ ಡಾ. ನಂದಾ ಜೆ. ಪೈ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ದೈಹಿಕ ಶಿಕ್ಷಣ ಸಂಯೋಜಕ ಸಿದ್ಧಪ್ಪ ಮತ್ತು ಶಾಲಾ ಮುಖ್ಯ ಶಿಕ್ಷಕಿ ಹರ್ಷಿಣಿ ಕೆ ಉಪಸ್ಥಿತರಿದ್ದರು.
ಭುವನೇಂದ್ರ ಪ್ರೌಢಶಾಲೆಯ ಸಹಶಿಕ್ಷಕ ನಾರಾಯಣ ಶೆಣೈ ನಿರೂಪಿಸಿದರು. ಸಂಸ್ಥೆಯ ಶಿಕ್ಷಕಿ ಶೈಲಜಾ ಹೆಗ್ಡೆ ವಂದಿಸಿದರು.