ಉಡುಪಿ: ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿಗಳು ಬುಧವಾರ ಪ್ಲಾಸ್ಟಿಕ್ ವಿರೋಧಿ ಅಭಿಯಾನವನ್ನು ವಿಭಿನ್ನವಾಗಿ ನಡೆಸಿದರು.
‘ಸ್ಟಾಪ್ ಪ್ಲಾಸ್ಟಿಕ್ ಮಣಿಪಾಲ್’ ಹೆಸರಿನಲ್ಲಿ ಅಭಿಯಾನ ಆರಂಭಿಸಿರುವ ವಿದ್ಯಾರ್ಥಿಗಳು ಬುಧವಾರ ಮಣಿಪಾಲ ನಗರ ಅಂಗಡಿಗಳ ಮಾಲೀಕರಿಗೆ ಹಾಗೂ ನಾಗರಿಕರಿಗೆ ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಮೂಡಿಸಿದರು.
ಮುಖಕ್ಕೆ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡು ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳನ್ನು ತಿಳಿಹೇಳುವ ಹೋರ್ಡಿಂಗ್ಗಳನ್ನು ಹಿಡಿದು ಸಂಚರಿಸಿದರು. ಪ್ಲಾಸ್ಟಿಕ್ ಸ್ಟ್ರಾಗಳನ್ನು ಬಳಸಬೇಡಿ ಎಂದು ಸಾರ್ವಜನಿಕರಲ್ಲಿ ಹಾಗೂ ಅಂಗಡಿ ಮಾಲೀಕರಿಗೆ ಮನವಿ ಮಾಡಿದರು.
ಕರಾವಳಿಯ ಕಡಲತೀರಗಳು, ಗುಡ್ಡಗಳು, ನಗರಗಳು ಪ್ಲಾಸ್ಟಿಕ್ ಎಂಬ ಮಹಾಮಾರಿಯಿಂದ ಹಾಳಾಗುತ್ತಿವೆ. ಪ್ಲಾಸ್ಟಿಕ್ ವಸ್ತುಗಳ ಬಳಕೆ ತ್ಯಜಿಸುವ ಸಂಕಲ್ಪ ಮಾಡೋಣ ಪರಿಸರ ಉಳಿಸೋಣ ಎಂದು ವಿದ್ಯಾರ್ಥಿಗಳು ಕರೆ ನೀಡಿದರು.
ಐನಾಕ್ಸ್, ಎಂಐಟಿ ಮುಂಭಾಗ, ಕೆನರಾ ಮಾಲ್, ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವಸತಿಗೃಹ, ಉಪೇಂದ್ರ ಪೈ ಸರ್ಕಲ್, ಎಂಡ್ ಪಾಯಿಂಟ್, ಸರಳೆಬೆಟ್ಟು ರಸ್ತೆ ಸೇರಿದಂತೆ ಹಲವೆಡೆ ತೆರಳಿದ ವಿದ್ಯಾರ್ಥಿಗಳು ಅರಿವು ಮೂಡಿಸಿದರು.
ರಾಜದೀಪ್ ಸಿನ್ಹಾ, ದಿಯಾ ಕಾವೇರಮ್ಮ ಅಭಿಯಾನದ ನೇತೃತ್ವ ವಹಿಸಿದ್ದರು.