ಉಡುಪಿ: ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎನ್. ಮುತ್ತಪ್ಪ ರೈ ಹಾಗೂ ಉದ್ಯಮಿ ಅಜಿತ್ ಶೆಟ್ಟಿ ಅವರು ಜಂಟಿಯಾಗಿ ಅಕ್ಟೋಬರ್ 2ರಂದು ₹ 2 ಕೋಟಿ ವೆಚ್ಚದ ಬ್ರಹ್ಮರಥವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಾಣಿಕೆ ರೂಪದಲ್ಲಿ ಅರ್ಪಣೆ ಮಾಡಲಿದ್ದಾರೆ ಎಂದು ಜಯಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಪೂಜಾರಿ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ನೂತನ ಬ್ರಹ್ಮರಥದ ಸಮರ್ಪಣೆಯ ಪೂರ್ವಭಾವಿಯಾಗಿ ಸೆ. 30ರಂದು ಬೆಳಿಗ್ಗೆ 9ಗಂಟೆಗೆ ಕೋಟೇಶ್ವರದಿಂದ ಸುಬ್ರಹ್ಮಣ್ಯದವರೆಗೆ ಭವ್ಯ ಮೆರವಣಿಗೆ ಹೊರಡಲಿದೆ. ಬಳಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬ್ರಹ್ಮರಥದ ಸಮರ್ಪಣೆ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
2018ರ ಮಾರ್ಚ್ 15ರಂದು ಬ್ರಹ್ಮರಥದ ಕೆತ್ತನೆ ಕೆಲಸ ಆರಂಭಿಸಲಾಗಿದ್ದು, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯ ರಥವನ್ನು ನಿರ್ಮಿಸಿದ್ದಾರೆ. ಮಹಾಭಾರತ ಹಾಗೂ ರಾಮಾಯಣದಂತಹ ಅಭೂತ ಪೂರ್ವ ಶಿಲ್ಪ ಕಲಾಕೃತಿಯನ್ನು ರಥದಲ್ಲಿ ಕೆತ್ತಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಗೌರವಾಧ್ಯಕ್ಷ ಶ್ರೀನಿವಾಸ್ ಶೆಟ್ಟಿಗಾರ್ ಬಾರ್ಕೂರು, ಗೌರವ ಸಲಹೆಗಾರ ಸುಧಾಕರ್ ರಾವ್, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಅಮೀನ್, ಕಾರ್ಯಾಧ್ಯಕ್ಷ ಶರತ್ ಶೆಟ್ಟಿ, ಹೋರಾಟ ಸಮಿತಿ ಅಧ್ಯಕ್ಷ ಕರುಣಾಕರ ಪೂಜಾರಿ ಇದ್ದರು.