ಮಣಿಪಾಲದ ಕೆಎಂಸಿ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಒಂದು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಕೋವಿಡ್ ಪತ್ತೆಯಾದ ಆರಂಭದಲ್ಲಿ ಸವಾಲುಗಳು ಎದುರಾಗಿದ್ದವು. ಜತೆಯಲ್ಲಿ ಕೆಲಸ ಮಾಡುವ ಸಹೋದ್ಯೋಗಿಗಳಿಗೆ ಕೋವಿಡ್ ತಗುಲಿದ್ದು ಮತ್ತಷ್ಟು ಆತಂಕ ಹೆಚ್ಚಿಸಿತ್ತು. ಎಲ್ಲಿ ಕುಟುಂಬದವರಿಗೆ ಸೋಂಕು ಹರಡುವುದೋ ಎಂಬ ಭಯವಿತ್ತು. ಕೋವಿಡ್ ವಾರ್ಡ್ನಲ್ಲಿ ಕೆಲಸ ಮಾಡುವ ಕಾರಣಕ್ಕೆ ಹಲವರಿಂದ ದೂರವಾಗಬೇಕಾಯಿತು. ಕೆಲಸ ಬಿಡುವಂತೆ ಕುಟುಂಬದ ಸದಸ್ಯರಿಂದಲೂ ಒತ್ತಡ ಬರುತ್ತಿತ್ತು. ವೈಯಕ್ತಿಕ ಒತ್ತಡ ಬದಿಗಿರಿಸಿ ಕೋವಿಡ್ ಸೋಂಕಿತರ ಆರೈಕೆಯಲ್ಲಿ ತೊಡಗಿಸಿಕೊಂಡೆ. ಶುಶ್ರೂಷಕಿಯರಿಗೆ ವೈಯಕ್ತಿಕ ಬದುಕಿಗಿಂತ ವೃತ್ತಿ ನಿಷ್ಠೆ ಮುಖ್ಯ ಎಂಬುದು ನನ್ನ ನಿಲುವು. ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ತೃಪ್ತಿ ಇದೆ. ಇದಕ್ಕೆ ಆಸ್ಪತ್ರೆಯಿಂದಲೂ ಅಗತ್ಯ ಸಹಕಾರ ಲಭ್ಯವಾಯಿತು. ವೈಯಕ್ತಿಕ ಸುರಕ್ಷತೆಗೆ ಬೇಕಾದ ಪರಿಕರಗಳನ್ನು ಕೆಎಂಸಿ ಆಡಳಿತ ಮಂಡಳಿ ಒದಗಿಸಿತು. ಪರಿಣಾಮ ಸೋಂಕಿತರಿಗೆ ಚಿಕಿತ್ಸೆ ನೀಡಿದರೂ ಸೋಂಕು ತಗುಲಲಿಲ್ಲ. ಒಂದು ವರ್ಷದ ಅವಧಿಯಲ್ಲಿ ನೂರಾರು ರೋಗಿಗಳು ಸೋಂಕಿನಿಂದ ಗುಣಮುಖರಾಗಿದ್ದಾರೆ. ರೋಗಿಗಳ ಕೃತಜ್ಞತಾ ಭಾವದ ಪ್ರತಿಕ್ರಿಯೆಗಳು ಶುಶ್ರೂಷಕಿಯರಿಗೆ ಸಲ್ಲುವ ನಿಜವಾದ ಗೌರವ ಎಂದು ಭಾವಿಸಿದ್ದೇನೆ. ಈಗ ಎರಡನೇ ಅಲೆಯ ವಿರುದ್ಧ ಒಟ್ಟಾಗಿ ಹೋರಾಡಬೇಕಿದೆ. ಧೈರ್ಯಗೆಡದೆ ಶುಶ್ರೂಷಕಿಯರು ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸಾರ್ವಜನಿಕರು ಸುರಕ್ಷಿತವಾಗಿ ಮನೆಯಲ್ಲಿರಿ. ಹೊರಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ. ಜತೆಯಾಗಿ ಕೋವಿಡ್ ವಿರುದ್ಧ ಹೋರಾಡೋಣ, ಗೆಲ್ಲೋಣ.