ಹೆಬ್ರಿ: ಕರಾವಳಿ ಹಾಗೂ ಮಲೆನಾಡು ಭಾಗವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿರುವ ಆಗುಂಬೆ ಘಾಟಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಬಿರುಕುಬಿಟ್ಟಿದ್ದು, ಕುಸಿಯುವ ಭೀತಿ ಎದುರಾಗಿದೆ.
ಹೆಬ್ರಿ ಹಾಗೂ ಆಗುಂಬೆ ಪರಿಸರದಲ್ಲಿ ನಿರಂತರ ಸುರಿದ ಭಾರಿ ಮಳೆಗೆ ಘಾಟಿಯ ಮಣ್ಣು ಸಡಿಲಗೊಂಡಿದ್ದು, ಅಲ್ಲಲ್ಲಿ ರಸ್ತೆ ಬಿರುಕುಬಿಟ್ಟಿದೆ. ಘಾಟಿಯ 12 ಹಾಗೂ 13ನೇ ತಿರುವಿನ ಮಧ್ಯೆಯ ರಸ್ತೆ ಬಿರುಕು ಬಿಟ್ಟಿದ್ದು, ಕುಸಿಯುವ ಭೀತಿ ಎದುರಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
2 ವರ್ಷದ ಹಿಂದೆ ಘಾಟಿಯಲ್ಲಿ ರಸ್ತೆ ಕುಸಿದು 1 ತಿಂಗಳು ಸಂಚಾರ ಬಂದ್ ಆಗಿತ್ತು. ಈ ವರ್ಷ ಸಮಸ್ಯೆ ಮರುಕಳಿಸದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸರಕುಗಳನ್ನು ಕೊಂಡೊಯ್ಯುವ ಭಾರಿ ವಾಹನಗಳ ಸಂಚಾರದಿಂದ ರಸ್ತೆ ಕುಸಿಯುವ ಭೀತಿ ಎದುರಾಗಿದ್ದು, ಈ ಬಗ್ಗೆ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಅಂಬುಲೆನ್ಸ್ಗಳಿಗೆ ಸಮಸ್ಯೆ:ಶಿವಮೊಗ್ಗ ಹಾಗೂ ಉಡುಪಿ ಸಂಪರ್ಕಿಸುವ ಘಾಟಿಯಲ್ಲಿ ರಸ್ತೆ ಕುಸಿದರೆ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಿಂದ ಬರುವ ಅಂಬುಲೆನ್ಸ್ಗಳು ಸುತ್ತುಬಳಸಿ ಮಣಿಪಾಲ ಅಥವಾ ಮಂಗಳೂರು ನಗರವನ್ನು ಸಂಪರ್ಕಿಸಬೇಕಾಗುತ್ತದೆ. ಘಾಟಿ ಬಂದ್ ಆದರೆ, ಜಿಲ್ಲೆಗೆ ಪೂರೈಕೆಯಾಗುವ ಹಣ್ಣು ಹಂಪಲುಗಳ, ಮೊಟ್ಟೆ, ತರಕಾರಿ, ಕೋಳಿ ಹಾಗೂ ಅಗತ್ಯ ವಸ್ತುಗಳ ಸರಬರಾಜಿಗೂ ಸಮಸ್ಯೆಯಾಗುತ್ತದೆ. ಕೂಡಲೇ ಕುಸಿಯುವ ಭೀತಿಯಲ್ಲಿರುವ ಘಾಟಿ ರಸ್ತೆಯನ್ನು ಸಮರ್ಪಕವಾಗಿ ದುರಸ್ತಿ ಮಾಡಬೇಕು ಎಂದು ನಾಡ್ಪಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಹೆಗ್ಡೆ ಒತ್ತಾಯಿಸಿದ್ದಾರೆ.
ರಸ್ತೆ ಬಿರುಕುಬಿಟ್ಟಿರುವ ವಿಚಾರ ಗಮನ್ಕೆ ಬಂದಿದ್ದು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಎಂಜಿನಿಯರ್ ಮಂಜುನಾಥ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.