ಉಡುಪಿ: ಕುಖ್ಯಾತ ರೌಡಿ ಬನ್ನಂಜೆ ರಾಜ ಅವರ ತಾಯಿ ವಿಲಾಸಿನಿ ಶೆಟ್ಟಿಗಾರ್ ಅವರ ಅಂತ್ಯಕ್ರಿಯೆ ಮಲ್ಪೆಯ ಬಾಪುತೋಟದಲ್ಲಿ ಸೋಮವಾರ ನೆರವೇರಿತು.
ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ನ್ಯಾಯಾಲಯದ ಅನುಮತಿ ನೀಡಿದ್ದ ಹಿನ್ನೆಲೆಯಲ್ಲಿ ಬನ್ನಂಜೆ ರಾಜನನ್ನು ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಿಗಿ ಭದ್ರತೆ ಮೂಲಕ ಉಡುಪಿಗೆ ಕರೆತಲಾಯಿತು. ಬೆಳಿಗ್ಗೆ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಬಳಿಕ ಮತ್ತೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. 28ರಂದು ಹಿಂಡಲಗ ಜೈಲಿಗೆ ರಾಜನನ್ನು ಕರೆದೊಯ್ಯಲಾಗುತ್ತದೆ.
ಬನ್ನಂಜೆ ರಾಜನ ತಾಯಿ ವಿಲಾಸಿನಿ ಶೆಟ್ಟಿಗಾರ್ ಅವರು ಮನೆಯಲ್ಲಿ ಆಕಸ್ಮಿಕವಾಗಿ ಜಾರಿ ಬಿದ್ದು, ತಲೆಗೆ ಗಂಭೀರ ಸ್ವರೂಪದ ಪೆಟ್ಟು ಮಾಡಿಕೊಂಡಿದ್ದರು. ಕೂಡಲೇ ಅವರನ್ನು ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.
ಈಚೆಗಷ್ಟೇ ಬನ್ನಂಜೆ ರಾಜ ಅನಾರೋಗ್ಯಪೀಡಿತರಾಗಿದ್ದ ತಾಯಿಯನ್ನು ನೋಡಲು ಉಡುಪಿಗೆ ಬಂದಿದ್ದರು. ತಾಯಿ ಹಾಗೂ ಬಂಧುಗಳ ಜತೆ ಕೆಲಹೊತ್ತು ಕಾಲ ಕಳೆದಿದ್ದರು.