ಉಡುಪಿ: ಜಿಲ್ಲೆಯಲ್ಲಿ ಡೆಂಗಿ ಉಲ್ಬಣಗೊಂಡಿದ್ದು ರಾಜ್ಯದಲ್ಲೇ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 578 ಮಂದಿ ಡೆಂಗಿ ಸೋಂಕಿನಿಂದ ಬಳಲುತ್ತಿದ್ದು, ಇಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ (ಒಂದು ಶಂಕಿತ ಸಾವು). ನೂರಾರು ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾಮಾನ್ಯವಾಗಿ ಪ್ರತಿವರ್ಷ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಡೆಂಗಿ ಕಾಣಿಸಿಕೊಳ್ಳುತ್ತಿತ್ತು. ಬೈಂದೂರು ಹಾಗೂ ಕುಂದಾಪುರ ತಾಲ್ಲೂಕುಗಳು ಡೆಂಗಿಗೆ ಹೆಚ್ಚು ಬಾಧಿತವಾಗುತ್ತಿದ್ದವು. ಬೈಂದೂರು ತಾಲ್ಲೂಕಿನ ಕೊಲ್ಲೂರು, ಮುದೂರು, ಜಡ್ಕಲ್ ಪ್ರದೇಶದಲ್ಲಿರುವ ರಬ್ಬರ್ ಪ್ಲಾಂಟೇಷನ್ಗಳು, ಅಡಿಕೆ ಹಾಗೂ ಅನಾನಸ್ ತೋಟಗಳು ಡೆಂಗಿ ಸೊಳ್ಳೆಗಳ ಉತ್ಪತ್ತಿಯ ತಾಣವಾಗುತ್ತಿತ್ತು.
ಆದರೆ, ಈ ಬಾರಿ ಡೆಂಗಿ ಹಾವಳಿ ನಗರ ಪ್ರದೇಶಗಳಲ್ಲಿ ಹೆಚ್ಚಾಗಿದೆ. ಜಿಲ್ಲೆಯ ಅರ್ಧದಷ್ಟು ಡೆಂಗಿ ಪ್ರಕರಣಗಳು ಉಡುಪಿ ಹಾಗೂ ಮಣಿಪಾಲ ನಗರ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಉಡುಪಿಯಲ್ಲಿ 206, ಮಣಿಪಾಲದಲ್ಲಿ 100 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಅವಳಿ ನಗರಗಳು ಡೆಂಗಿಗೆ ಸಂಪೂರ್ಣವಾಗಿ ನಲುಗಿ ಹೋಗಿವೆ.
ಉಳಿದಂತೆ ಮಲ್ಪೆಯಲ್ಲಿ 26, ಕೆಮ್ಮಣ್ಣು 24, ಪಡುಬಿದ್ರಿ 21, ಹಿರೇಬೆಟ್ಟು 18, ಬ್ರಹ್ಮಾವರ 18, ಹೆಬ್ರಿ 11, ಕಾಪು, ಮೂಡಬೆಟ್ಟು ಭಾಗಗಳಲ್ಲಿ ತಲಾ 10, ಶಿರ್ವದಲ್ಲಿ 8, ಕುಕ್ಕೆಹಳ್ಳಿ 8, ಮಣಿಪುರ 7, ಮುದರಂಗಡಿ 5, ಕಿರಿ ಮಂಜೇಶ್ವರ 5, ಕೊಳಲಗಿರಿ, ಪೆರ್ಣಂಕಿಲ 4, ಸಾಲಿಗ್ರಾಮ 4 ಪ್ರದೇಶಗಳಲ್ಲಿ ತಲಾ ನಾಲ್ಕು ಡೆಂಗಿ ಪ್ರಕರಣಗಳು ಪತ್ತೆಯಾಗಿವೆ.
ಡೆಂಗಿ ಉಲ್ಬಣಕ್ಕೆ ಕಾರಣ: ಜಿಲ್ಲೆಯಲ್ಲಿ ಡೆಂಗಿ ಅಬ್ಬರಕ್ಕೆ ವಾತಾವರಣದಲ್ಲಾಗಿರುವ ಬದಲಾವಣೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಪ್ರತಿವರ್ಷ ಮಳೆಗಾಲದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದ ಪರಿಣಾಮ ಡೆಂಗಿ ಹರಡುವ ಸೊಳ್ಳೆಗಳ ಉತ್ಪತ್ತಿ ತಕ್ಕಮಟ್ಟಿಗೆ ನಿಯಂತ್ರಣವಾಗುತ್ತಿತ್ತು. ನಿಂತ ನೀರಿನಲ್ಲಿ ಉತ್ಪತ್ತಿಯಾಗುತ್ತಿದ್ದ ಸೊಳ್ಳೆಯ ಮೊಟ್ಟೆಗಳು ಜೋರು ಮಳೆಗೆ ಕೊಚ್ಚಿಹೋಗುತ್ತಿತ್ತು.
ಆದರೆ, ಈ ಬಾರಿ ಸೊಳ್ಳೆಗಳು ಮೊಟ್ಟೆ ಇಡಲು ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ಸೊಳ್ಳೆಗಳು ಬಹುಬೇಗನೆ ಉತ್ಪತ್ತಿಯಾಗಲು ಪ್ರಶಸ್ತವಾಗಿರುವ ಬಿಸಿಲು ಹಾಗೂ ಮಳೆಯ ವಾತಾವರಣ ಇರುವುದು ಡೆಂಗಿ ಸಮಸ್ಯೆ ಗಂಭೀರವಾಗಲು ಕಾರಣ ಎನ್ನುತ್ತಾರೆ ವೈದ್ಯರು.
ರಕ್ತ ಕೇಂದ್ರಗಳಲ್ಲಿ ಪ್ಲೇಟ್ಲೇಟ್ ಕೊರತೆ: ಡೆಂಗಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯ ಪ್ರಮುಖ ರಕ್ತನಿಧಿ ಕೇಂದ್ರಗಳಲ್ಲಿ ಪ್ಲೇಟ್ಲೇಟ್ಗಳ ಕೊರತೆ ಎದುರಾಗಿದೆ. ಡೆಂಗಿ ಸೋಂಕಿತರಲ್ಲಿ ಪ್ಲೇಟ್ಲೇಟ್ಗಳ ಸಂಖ್ಯೆ 10,000ಕ್ಕಿಂತ ಕಡಿಮೆಯಾದರೆ ಪ್ಲೇಟ್ಲೇಟ್ಗಳನ್ನು ಒದಗಿಸಬೇಕಾಗುತ್ತದೆ. ಇಲ್ಲವಾದರೆ ರೋಗಿಗಳಿಗೆ ಪ್ರಾಣಾಪಾಯ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಜಿಲ್ಲೆಯ ರಕ್ತನಿಧಿ ಕೇಂದ್ರಗಳಲ್ಲಿ ಪ್ಲೇಟ್ಲೇಟ್ಗಳ ಕೊರತೆ ಎದುರಾಗಿರುವುದರಿಂದ ರೋಗಿಗಳ ಸಂಬಂಧಿಗಳು, ಸ್ನೇಹಿತರು ಬದಲಿ ರಕ್ತದಾನಿಗಳ ವ್ಯವಸ್ಥೆ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಪ್ಲೇಟ್ಲೇಟ್ ಜೀವಿತಾವಧಿ 5 ದಿನ ಮಾತ್ರ: ರಕ್ತವನ್ನು ಒಂದು ತಿಂಗಳ ಕಾಲ ಶೇಖರಿಸಿಡಬಹುದು, ಆದರೆ, ಪ್ಲೇಟ್ಲೇಟ್ಗಳ ಆಯುಷ್ಯ ಕೇವಲ 5 ದಿನ ಮಾತ್ರ. ಏಕಕಾಲದಲ್ಲಿ ಹೆಚ್ಚಿನ ಪ್ರಮಾಣದ ಪ್ಲೇಟ್ಲೇಟ್ಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯವಿಲ್ಲದಿರುವುದರಿಂದ ನಿಯಮಿತವಾಗಿ ರಕ್ತದಾನಿಗಳು ರಕ್ತದಾನ ಮಾಡಿದರೆ ಮಾತ್ರ ಪ್ಲೇಟ್ಲೇಟ್ಗಳ ಕೊರತೆ ನೀಗಿಸಬಹುದು ಎನ್ನುತ್ತಾರೆ ಕೆಎಂಸಿ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಶಮಿ ಶಾಸ್ತ್ರೀ.
ಪ್ಲೇಟ್ಲೇಟ್ ದಾನಿಗಳು ಅಗತ್ಯ: ಡೆಂಗಿ ಪ್ರಕರಣಗಳು ಹೆಚ್ಚಾಗಿರುವ ಈ ಹೊತ್ತಿನಲ್ಲಿ ರಕ್ತದಾನ ಮಾಡುವುದಕ್ಕಿಂತ ನೇರವಾಗಿ ಪ್ಲೇಟ್ಲೇಟ್ (ಅಪೆರೆಸಿಸ್) ದಾನ ಮಾಡಿದರೆ ಅನುಕೂಲ. ಐವರು ಯೂನಿಟ್ ರಕ್ತದಿಂದ ಸಂಗ್ರಹವಾಗುವ ಪ್ಲೇಟ್ಲೇಟ್ಗಳ ಪ್ರಮಾಣ, ಒಬ್ಬ ಅಪರೆಸಿಸ್ ದಾನಿಯಿಂದ ಪಡೆಯುವ ಪ್ಲೇಟ್ಲೇಟ್ಗಳಿಗೆ ಸಮನಾಗಿರುತ್ತದೆ.
ರಕ್ತದಾನಿಗಳಿಂದ ಅಪೆರೆಸಿಸ್ ಪಡೆಯುವ ಪ್ರಕ್ರಿಯೆ ಸುಮಾರು 1 ತಾಸಿಗೂ ಹೆಚ್ಚು ಕಾಲ ತಗುಲುತ್ತದೆ. ಈ ಪ್ರಕ್ರಿಯೆಯಲ್ಲಿ ದಾನಿಗಳಿಂದ ರಕ್ತವನ್ನು ಪಡೆಯುವುದಿಲ್ಲ; ಬದಲಾಗಿ ಪ್ಲೇಟ್ಲೆಟ್ಗಳನ್ನು ಮಾತ್ರ ತೆಗೆಯಲಾಗುತ್ತದೆ. ಅಪರೆಸಿಸ್ ದಾನದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎನ್ನುತ್ತಾರೆ ಶಮಿ ಶಾಸ್ತ್ರೀ.
ಡೆಂಗಿ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ಲೇಟ್ಲೇಟ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಸಮಸ್ಯೆ ಗಂಭೀರವಾಗಿಲ್ಲ. ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿರುವುದರಿಂದ ಅಗತ್ಯ ಪ್ರಮಾಣದ ರಕ್ತ ಸಂಗ್ರಹವಾಗುತ್ತಿದೆ– ಡಾ.ವೀಣಾ, ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ
ಡೆಂಗೆ ಪ್ರಕರಣಗಳು ಹೆಚ್ಚಾಗಿರುವುದರಿಂದ ವಾರಾಂತ್ಯದಲ್ಲಿ ಪ್ಲೇಟ್ಲೇಟ್ಗಳ ಕೊರತೆ ಕಾಡುತ್ತಿದೆ. ನಿರಂತರ ರಕ್ತದಾನ ಶಿಬಿರಗಳು ನಡೆಯುತ್ತಿರುವುದರಿಂದ ಸಮಸ್ಯೆ ಹೆಚ್ಚಾಗಿಲ್ಲ. ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಅಪೆರೆಸಿಸ್ ದಾನ ಮಾಡಬೇಕು–ಶಮಿ ಶಾಸ್ತ್ರಿ ಕೆಎಂಸಿ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ
ಡೆಂಗಿ ಬಾಧಿತ ಗ್ರಾಮಗಳು
ಉಡುಪಿ–206
ಮಣಿಪಾಲ–100
ಮಲ್ಪೆ–26
ಕೆಮ್ಮಣ್ಣು–24
ಪಡುಬಿದ್ರಿ–21
ಹಿರೇಬೆಟ್ಟು–18
ಬ್ರಹ್ಮಾವರ–18
ಹೆಬ್ರಿ–11
ಕಾಪು–10
ಮೂಡಬೆಟ್ಟು–10
ಶಿರ್ವ–8
ಕುಕ್ಕೆಹಳ್ಳಿ–8
ಮಣಿಪುರ–7
ಮುದರಂಗಡಿ–5
ಕಿರಿ ಮಂಜೇಶ್ವರ–5
ಕೊಳಲಗಿರಿ–4
ಪೆರ್ಣಂಕಿಲ–4
ಸಾಲಿಗ್ರಾಮ–4
ಹಾಲಾಡಿ–3
ದೊಡ್ಡರಂಗಡಿ–3
ಇರ್ಗಾನ–3
ಕೊರ್ಗಿ–3
ಕುಕ್ಕುಂದೂರು–3
ಮಾಳ–3
ನಿಟ್ಟೆ–3
ಪೇತ್ರಿ–3
ವಂಡ್ಸೆ–2
ಸಿದ್ದಾಪುರ–2
ಶಂಕರನಾರಾಯಣ–2
ಸೈಬರಕಟ್ಟೆ–2
ಮಂದಾರ್ತಿ–2
ಕುಂಭಾಶಿ–2
ಕೋಟ–2
ಕೊಕ್ಕರ್ಣೆ–2
ಅಜೆಕಾರು–2
ಕೆದೂರು–2
ಕರ್ಜೆ–2
ಬಾರ್ಕೂರು–2
ಹಿರಿಯಡ್ಕ–2
ಗಂಗೊಳ್ಳಿ ಬೆಳ್ಮಣ್ಣು ಬಸ್ರೂರು ಜಿ.ಎಚ್ ಕಾರ್ಕಳ ಇನ್ನಾ ಕೋಡಿಬೆಂಗ್ರೆ ಕೊಲ್ಲೂರುಮರವಂತೆ ಪಳ್ಳಿ ಸಾಸ್ತಾನ ಬೈಲೂರು ಬಜಗೋಳಿಯಲ್ಲಿ ತಲಾ ಒಂದು ಡೆಂಗಿ ಪ್ರಕರಣಗಳು ಪತ್ತೆಯಾಗಿವೆ.
ತಾಲ್ಲೂಕು;ಡೆಂಗಿ ಪ್ರಕರಣ
ಬ್ರಹ್ಮಾವರ;39
ಉಡುಪಿ;431
ಕಾಪು;46
ಬೈಂದೂರು;5
ಕುಂದಾಪುರ;22
ಹೆಬ್ರಿ;19
ಕಾರ್ಕಳ;21
ಉಡುಪಿ;578
ಮೈಸೂರು;480
ಶಿವಮೊಗ್ಗ;232
ಕಲಬುರ್ಗಿ;219
ದಕ್ಷಿಣ ಕನ್ನಡ;210
ವಿಜಯಪುರ;195
ಚಿತ್ರದುರ್ಗ;167
ಚಿಕ್ಕಮಗಳೂರು;156
ಬೆಳಗಾವಿ;154
ದಾವಣಗೆರೆ;152
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.