ಉಡುಪಿ: ಏರ್ ಗನ್ನಿಂದ ಶೂಟ್ ಮಾಡಿದ ಪರಿಣಾಮ ಸಾಕುನಾಯಿ ಮೃತಪಟ್ಟಿದ್ದು ಈ ಸಂಬಂಧ ಆರೋಪಿ ಬ್ರಾನ್ ಡಿಸೋಜ ಎಂಬ ವ್ಯಕ್ತಿಯನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಫೆ.12ರಂದು ಗುಂಡಪ್ಪ ಪೂಜಾರಿ ಕೆಮ್ಮಣ್ಣು ಪ್ರದೇಶದಲ್ಲಿರುವ ಹಾಲಿನ ಡೈರಿಯಿಂದ ಮೂಡುತೋನ್ಸೆಯಲ್ಲಿರುವ ಮನೆಗೆ ಹೋಗುವಾಗ ಅವರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ನಾಯಿಗೆ ಬ್ರಾನ್ ಡಿಸೋಜ ಏರ್ ಗನ್ನಿಂದ ಶೂಟ್ ಮಾಡಿದ್ದರು. ನಾಯಿಯ ಹೊಟ್ಟೆಗೆ ಬಲವಾದ ಗಾಯವಾಗಿ ಮೃತಪಟ್ಟಿತ್ತು.
ಈ ಸಂಬಂಧ ಮಲ್ಪೆ ಠಾಣೆಯಲ್ಲಿ ಗುಂಡಪ್ಪ ಪೂಜಾರಿ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿತ್ತು. ಶನಿವಾರ ಆರೋಪಿ ಬ್ರಾನ್ ಡಿಸೋಜಾರನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಅದೇ ದಿನ ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ.