ಉಡುಪಿ: ಪ್ರಸಕ್ತ ಸಾಲಿನರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಹಿರಿಯ ಪುರಾತತ್ವ ಶಾಸ್ತ್ರಜ್ಞ ಹಾಗೂ ಇತಿಹಾಸಕಾರ ಪ್ರೊ.ಅ.ಸುಂದರ ಅವರಿಗೆ ಸಂದಿದೆ.
ಮಾರ್ಚ್ 23ರಂದು ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಗೃಹದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ತಿಳಿಸಿದ್ದಾರೆ.
ಮಣಿಪಾಲ ಗ್ಲೋಬಲ್ ಸಂಸ್ಥೆ ಮುಖ್ಯಸ್ಥ ಟಿ.ವಿ. ಮೋಹನದಾಸ ಪೈ ಅವರು ತಾಯಿ ವಿಮಲಾ ಪೈ ಹೆಸರಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ಪ್ರಶಸ್ತಿ ನೀಡುತ್ತಿದ್ದು, ಪ್ರಶಸ್ತಿಯು ₹ 1 ಲಕ್ಷ ಒಳಗೊಂಡಿದೆ.
ಉಡುಪಿ ಸಮೀಪದ ನೀಲಾವರದ ಪ್ರೊ.ಅ.ಸುಂದರ ಪುರಾತತ್ವ ಇಲಾಖೆಯಲ್ಲಿ ಬಹುಕಾಲ ದುಡಿದಿದ್ದು, ಧಾರವಾಡದ ಕರ್ನಾಟಕ ವಿವಿ ಪ್ರಾಚೀನ ಭಾರತೀಯ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಬಿಜಾಪುರದ ಸ್ನಾತಕೋತ್ತರ ವಿಭಾಗದ ನಿರ್ದೇಶಕರಾಗಿ, ಮೈಸೂರು ವಿ.ವಿಯ ಝಾಕಿರ್ ಹುಸೇನ್ ಪೀಠದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಹಲವು ಉತ್ಖನನಗಳನ್ನು ನಡೆಸಿದ್ದು, ಸಾಂಸ್ಕೃತಿಕ ಪರಂಪರೆಯ ರಕ್ಷಣೆಗೆ ಮುತುವರ್ಜಿ ವಹಿಸಿದ್ದಾರೆ.