ಸೇತುವೆ ಕನಸು; ಮತ್ತಾವು ನಿವಾಸಿಗಳ ಮುನಿಸು

ಹೆಬ್ರಿ: ತಾಲ್ಲೂಕಿನ ಕಬ್ಬಿನಾಲೆಯ ಮತ್ತಾವು ನಿವಾಸಿಗಳ ಕನಸು ಇನ್ನೂ ನನಸಾಗಿಲ್ಲ. ಮುದ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮದ ಜನರು ನಾಲ್ಕು ದಶಕಗಳಿಂದ ಸೇತುವೆ ಗಾಗಿ ಬೇಡಿಕೆ ಇರಿಸುತ್ತಿದ್ದು ಅವರ ಬೇಡಿಕೆ ಇನ್ನೂ ಈಡೇರಿಲ್ಲ. ಮಳೆಗಾಲದ ಆರು ತಿಂಗಳು ರಸ್ತೆಯನ್ನು ಸಂಪರ್ಕಿಸಲು ಕಾಲು ಸಂಕವೇ ಆಧಾರ. ಅದರ ಮೇಲಿನ ಸಂಚಾರದ ಸವಾಲು ಬೇರೆ. ಸ್ವಲ್ಪ ಎಡವಿದರೂ ಹೊಳೆಗೆ ಬೀಳುವ ಅಪಾಯ.
ಇಲ್ಲಿನ ಮಲೆಕುಡಿಯ ಸಮುದಾಯ ದವರು ಸೇತುವೆ ನಿರ್ಮಿಸಲು ಪರಿಪರಿ ಯಾಗಿ ಅಧಿಕಾರಿಗಳನ್ನು ಹಾಗೂ ರಾಜಕರಣಿಗಳನ್ನು ಬೇಡಿ ಕೊಂಡಿದ್ದಾರೆ. 11 ಕುಟುಂಬಗಳ 65 ಮಂದಿ ವಾಸಿಸುತ್ತಿದ್ದು 15 ವರ್ಷ ಗಳಿಂದ ಹ್ಯಾಮ್ಲೆಟ್ ಯೋಜನೆಯ ಮೂಲಕ ಇಲ್ಲಿನವರು ಬೆಳಕು ಕಂಡಿದ್ದಾರೆ. ಇಲ್ಲಿನವರು ಕಾರ್ಕಳ, ಹೆಬ್ರಿ, ಮುನಿಯಾಲು ಹಾಗೂ ಕಬ್ಬಿನಾಲೆ ಸಂಪರ್ಕಿಸಬೇಕಾದರೆ ಮತ್ತಾವು ಹೊಳೆ ದಾಟುವುದು ಅನಿವಾರ್ಯ.
ಮಳೆಗಾಲದಲ್ಲಿ ಕಾಲುಸಂಕ ನಿರ್ಮಿಸುತ್ತಾರೆ. ಆದರೆ ಅದು ಕೆಲವೊಮ್ಮೆ ಕೊಚ್ಚಿಕೊಂಡು ಹೋಗುತ್ತದೆ.
ನಕ್ಸಲ್ ಬಾಂಬ್ ದಾಳಿಗೆ 17 ವರ್ಷ: ನಕ್ಸಲರು 2005ರ ಜುಲೈ 28ರಂದು ಮತ್ತಾವು ಸಮೀಪ ನೆಲಬಾಂಬ್ ಸ್ಫೋಟಿಸಿದ್ದರು. ಪೊಲೀಸರು ಗಂಭೀರ ಗಾಯ ಗೊಂಡಿದ್ದರು. ಘಟನೆ ನಡೆದು ಒಂದೂವರೆ ದಶಕ ಕಳೆದರೂ ಮೂಲಸೌಕರ್ಯ ಅಭಿವೃದ್ಧಿ ಮರೀಚಿಕೆಯಾಗಿದೆ. ಆರೋಗ್ಯ ಹದಗೆಟ್ಟರೆ ಅಪಾಯ. ತುರ್ತು ಆರೋಗ್ಯದ ಸಮಸ್ಯೆ ಉಂಟಾದವರನ್ನು ಹೊತ್ತುಕೊಂಡೇ ಸಾಗಬೇಕಾಗಿದೆ.
‘ವರ್ಷಗಳ ಹಿಂದೆ ಹುಲ್ಲು ತರಲು ಹೋದ ನನ್ನ ತಮ್ಮ ಬಂಡೆಕಲ್ಲು ಮೇಲೆ ಜಾರಿ ಬಿದ್ದಿದ್ದ.
ಕಾಲುಸಂಕದ ಮೂಲಕ ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸಲಾಗಿತ್ತು. ವಿಳಂಬವಾದ ಕಾರಣ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಸೇತುವೆ ಇದ್ದಿದ್ದರೆ ಆತ ಉಳಿಯುತ್ತಿದ್ದ’ ಎಂದು ನಾರಾಯಣ ಗೌಡ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.