ಕಾರ್ಕಳ: ಕನ್ನಡ ಉಳಿಸಿ ಆಂದೋಲನದಿಂದ ಆರ್ಥಿಕವಾಗಿ ದುರ್ಬಲರಾದ ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುವುದರಿಂದ ಮಕ್ಕಳ ಇಂಗ್ಲೀಷ್ ಸಂವಹನದ ಕನಸು ನನಸಾಗಿಸಬಹುದು. ಆರ್ಥಿಕ ಹೊರೆ ತಪ್ಪಿಸಬಹುದು, ಗಣನೀಯ ಪ್ರಮಾಣದಲ್ಲಿ ಶಾಲಾ ದಾಖಲಾತಿ ಹೆಚ್ಚಾಗಲಿದೆ ಎಂದು ಉಡುಪಿಯ ಶೆಫಿನ್ಸ್ ಅಕಾಡೆಮಿ ನಿರ್ದೇಶಕ ಮನೋಜ್ ಕಡಬ ಹೇಳಿದರು.
ತಾಲ್ಲೂಕಿನ ಯರ್ಲಪಾಡಿ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನದ ಅಂಗವಾಗಿ ಶಿಕ್ಷಕರಿಗಾಗಿ ಆಯೋಜಿಸಿದ ಉಚಿತ ಸ್ಪೋಕನ್ ಇಂಗ್ಲೀಷ್ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳ ಇಂಗ್ಲಿಷ್ ಪ್ರಹಸನ ಗಮನ ಸೆಳೆಯಿತು. ಕಲಿಕಾ ಸಾಮಾಗ್ರಿಗಳನ್ನು ದಾನಿಗಳ ನೆರವಿನಿಂದ ನೀಡಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನರಂಗ ಕುಲಾಲ್, ದಿನೇಶ್ ಪೂಜಾರಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಸುರೇಶ್ ಕುಮಾರ್, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಮುಖ್ಯಶಿಕ್ಷಕಿ ಸುನಂದಾ ಎಲ್.ಎಸ್. ಸ್ವಾಗತಿಸಿದರು. ಸೌಮ್ಯಾ ನಿರೂಪಿಸಿದರು. ಸುದರ್ಶಿನಿ ವಂದಿಸಿದರು.