ಉಡುಪಿ: ನೂತನ ಸಚಿವರು ಹಾಲಿನೊಂದಿಗೆ ಸಕ್ಕರೆ ಬೆರೆತಂತೆ ಸಿಹಿಯಾಗಿ ನಮ್ಮೊಟ್ಟಿಗಿದ್ದಾರೆ. ಯಾವುದೇ ಭಿನ್ನಮತ ಇಲ್ಲ ಎಂದುಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಮೂಲ ಬಿಜೆಪಿಗರು, ಹೊರಗಿನಿಂದ ಬಂದವರು, ಹೋದವರು ಎಂಬ ಪ್ರಶ್ನೆ ಇಲ್ಲ. ಪಕ್ಷಕ್ಕೆ ಬಂದವರೆಲ್ಲರೂ ನಮ್ಮೊಂದಿಗೆ ಒಂದಾಗಿದ್ದಾರೆ ಎಂದರು.
ಟ್ರಂಪ್ ಭೇಟಿಯಿಂದ ಬಾಂಧವ್ಯ ಗಟ್ಟಿ:ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸದಿಂದ ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುತ್ತದೆ. ಭಾರತಕ್ಕೆ ಅಮೆರಿಕಾದಿಂದ ಹೆಚ್ಚಿನ ನೆರವು ಸಿಗಲಿದೆ. ಜಗತ್ತು ಭಾರತದ ಕಡೆಗೆ ನೋಡುತ್ತಿದೆ. ಪ್ರಧಾನಿ ಮೋದಿ ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ ಎಂದರು.
ವಿರೋಧ ಪಕ್ಷಗಳು ವಿರೋಧ ಮಾಡಬೇಕು ಎಂಬ ಕಾರಣಕ್ಕೆ ಟ್ರಂಪ್ ಭೇಟಿ ವಿಚಾರದಲ್ಲೂ ವಿರೋಧ ಮಾಡುತ್ತಿವೆ. ಕಾಂಗ್ರೆಸ್ ಬೌದ್ಧಿಕವಾಗಿ ದಿವಾಳಿಯಾಗಿದೆ.ಕಾಂಗ್ರೆಸ್ ಆಡಳಿತದಲ್ಲಿ ಒಬಾಮ ಭೇಟಿನೀಡಿದಾಗ ಇದಕ್ಕಿಂತ ಅದ್ಧೂರಿ ಸ್ವಾಗತ ನೀಡಲಾಗಿತ್ತು. ಒಬಾಮ ಲೋಕಸಭೆಯಲ್ಲಿ ಭಾಷಣವನ್ನೂ ಮಾಡಿದ್ದರು. ಈಗ ಟ್ರಂಪ್ ಭೇಟಿಗೆ ವಿರೋಧ ಏಕೆ ಎಂದು ಕಟೀಲ್ ಪ್ರಶ್ನಿಸಿದರು.
ಸಿ.ಎಂ. ಇಬ್ರಾಹಿಂ ಬಿಜೆಪಿ ಬಗ್ಗೆ ಮಾತನಾಡುವುದನ್ನು ಬಿಟ್ಟು, ಕಾಂಗ್ರೆಸ್ಗೆ ಮೊದಲು ಅಧ್ಯಕ್ಷರನ್ನು ಆಯ್ಕೆ ಮಾಡಲಿ. ಕಾಂಗ್ರೆಸ್ ಉಳಿಸುವ ಬಗ್ಗೆ ಚಿಂತನೆ ಮಾಡಲಿ ಎಂದು ತಿರುಗೇಟು ನೀಡಿದರು.