ಕೋಟ(ಬ್ರಹ್ಮಾವರ): ಶಿಕ್ಷಣಕ್ಕೆ ಅರಿವು ಮತ್ತು ಅಕ್ಷರವೇ ಮೂಲ. ಚೋಮನ ದುಡಿಯಂತಹ ತಳ ಸಮುದಾಯದ ಬದುಕಿನ ಕುರಿತು ಕೃತಿ ರಚಿಸಿ ಚಿಂತಕನೊಬ್ಬನ ಚಿಂತನೆಗೆ ದಾರಿ ತೋರಿದ ಕಾರಂತರ ನೆನಪಿನಲ್ಲಿರುವ ಈ ಕಾರಂತ ಥೀಂ ಪಾರ್ಕ್ ಸಮಾಜಕ್ಕೆ ಕಾರಂತರ ಚಿಂತನೆಗಳನ್ನು, ಅವರ ಮೌಲ್ಯ ಎತ್ತಿ ಹಿಡಿಯುವ ಸ್ಥಳವಾಗಿದ್ದು, ಇನ್ನಷ್ಟೂ ಅಭಿವೃದ್ಧಿಗೊಂಡು ಸಾಹಿತ್ಯ ಪ್ರೇಮಿಗಳನ್ನು ಸೆಳೆಯುವಂತಾಗಲಿ ಎಂದು ತಹಶೀಲ್ದಾರ್ ರಾಜಶೇಖರ್ ಮೂರ್ತಿ ಹೇಳಿದರು.
ಕೋಟದ ಡಾ. ಶಿವರಾಮ ಕಾರಂತ ಥೀಂ ಪಾರ್ಕ್ಗೆ ಭೇಟಿ ನೀಡಿ ಕಾರಂತರ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ರಂಗ ಮಂದಿರ ಆರ್ಟ್ ಗ್ಯಾಲರಿ, ಅಂಗನವಾಡಿ, ಗ್ರಂಥಾಲಯ ವೀಕ್ಷಿಸಿ ಮಾತನಾಡಿದರು.
ಗ್ರಂಥಾಲಯದಲ್ಲಿನ ಪುಸ್ತಕಗಳ ಶೇಖರಣೆ ವ್ಯವಸ್ಥೆ ಶ್ಲಾಘಿಸಿ, ತಾವು ಒಂದಿಷ್ಟು ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡುವುದಾಗಿ ತಿಳಿಸಿದರು.
ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ, ಪಿ.ಡಿ.ಒ ಶೈಲಾ ಎಸ್ ಪೂಜಾರಿ, ಕೋಟ ಕಂದಾಯ ನಿರೀಕ್ಷಕ ರಾಜು, ಗ್ರಾಮಕರಣಿಕ ಚೆಲುವರಾಜ್, ಗ್ರಾಮ ಸಹಾಯಕ ರಾಜು, ಗ್ರಂಥಾಲಯ ಮೇಲ್ವಿಚಾರಕಿ ಶೈಲಜ ಕೆ.ಎನ್, ಕಲ್ಮಾಡಿ ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮೀ ಇದ್ದರು.