ಉಡುಪಿ: ಜಿಲ್ಲೆಯಲ್ಲಿ ಸರ್ಕಾರಿ ಭೂಮಿಯ ಕೊರತೆ ಇರುವುದರಿಂದ ಬೃಹತ್ ಕೈಗಾರಿಕಾ ಪಾರ್ಕ್ಗಳ ಸ್ಥಾಪನೆಯ ಬದಲಾಗಿ ಚಿಕ್ಕ ಕೈಗಾರಿಕಾ ಪಾರ್ಕ್ಗಳ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ. ಜಿಲ್ಲಾಡಳಿತದ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.
ಗುರುವಾರ ಪ್ರೆಸ್ಕ್ಲಬ್ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಭೂ, ಸಮುದ್ರ ಹಾಗೂ ವಾಯು ಸಾರಿಗೆ ಸಂಪರ್ಕ ವ್ಯವಸ್ಥೆ ಉತ್ತಮವಾಗಿರುದರಿಂದ ಬಂಡವಾಳ ಹೂಡಲು ಉದ್ಯಮಿಗಳು ಸಿದ್ಧರಿದ್ದಾರೆ. ಆದರೆ, ಸರ್ಕಾರದ ಭೂಮಿಯ ಕೊರತೆಯ ಕಾರಣದಿಂದ ಉದ್ಯಮಿಗಳ ನಿರೀಕ್ಷೆಗೆ ತಕ್ಕಷ್ಟು ಭೂಮಿ ನೀಡಲಾಗುತ್ತಿಲ್ಲ ಎಂದರು.
ಖಾಸಗಿ ಭೂಮಿಯ ದರವೂ ದುಬಾರಿಯಾಗಿರುವ ಕಾರಣ ಬೃಹತ್ ಕೈಗಾರಿಕಾ ಪಾರ್ಕ್ಗಳ ಸ್ಥಾಪನೆಗೆ ತೊಡಗಾಗಿದೆ. ಈ ಸಮಸ್ಯೆ ನಿವಾರಣೆಗೆ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಸ್ಥಾಪನೆಗೆ ಸಣ್ಣ ಕೈಗಾರಿಕಾ ಪಾರ್ಕ್ಗಳನ್ನು ನಿರ್ಮಿಸಲು ಜಿಲ್ಲಾಡಳಿತ ಪ್ರಸ್ತಾವ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ ಎಂದರು.
ಬೈಂದೂರಿನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ 60 ಎಕರೆ ಜಾಗ ಗುರುತಿಸಲಾಗಿದೆ. ಉಡುಪಿ ಹಾಗೂ ಕಾಪು ತಾಲ್ಲೂಕಿನಲ್ಲೂ ಕೈಗಾರಿಕಾ ಪಾರ್ಕ್ಗಳ ಸ್ಥಾಪನೆಗೆ ಜಾಗ ಗುರುತಿಸುವಂತೆ ಕೆಐಎಡಿಬಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿ ತಿಳಿಸಿದರು.
ಕಾರ್ಕಳದಲ್ಲಿ ಜವಳಿ ಹಾಗೂ ಫುಡ್ ಪಾರ್ಕ್, ಉಡುಪಿಯಲ್ಲಿ ಫರ್ನಿಚರ್ ಪಾರ್ಕ್ ಹಾಗೂ ಎಲ್ಲ ತಾಲ್ಲೂಕುಗಳಲ್ಲಿಯೂ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಗುರುತಿಸಲಾಗುತ್ತಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಮಾಡುವುದು ಜಿಲ್ಲಾಡಳಿತದ ಆಶಯವಾಗಿದೆ ಎಂದರು.
ಕೊರೊನಾ ಆತಂಕ ನಿವಾರಣೆಯಾಗಿಲ್ಲ
ಎಂಐಟಿಯಲ್ಲಿ ಅತಿಹೆಚ್ಚು ಸೋಂಕು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ಪ್ರಬಲವಾಗಿತ್ತು. ಕಂಟೈನ್ಮೆಂಟ್ ವಲಯವಾಗಿಸಿದ್ದರಿಂದ ಸೋಂಕು ಹೊರಗೆ ವ್ಯಾಪಿಸಲಿಲ್ಲ. ಕಳೆದ 15 ದಿನಗಳಲ್ಲಿ 34,900 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, 1,101 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಶೇ 3.15ರಷ್ಟು ಪಾಸಿಟಿವಿಟಿ ದರ ಇದೆ. ಮರಣ ಪ್ರಮಾಣ ಶೇ 1 ಮೀರಿಲ್ಲ ಎಂದರು.
ಮಣಿಪಾಲದ ಕೆಎಂಸಿಯಲ್ಲಿ ಕೋವಿಡ್ ಸೋಂಕಿತರಿಂದ ಎಲ್ಲ ಐಸಿಯು ಬೆಡ್ಗಳು ಭರ್ತಿಯಾಗಿಲ್ಲ. ಬೇರೆ ಕಾಯಿಲೆಗಳ ರೋಗಿಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆಗೆ ಶೇ 20ರಷ್ಟು ಐಸಿಯು ಬೆಡ್ಗಳನ್ನು ಮೀಸಲಿಡಲು ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸದ್ಯ 55 ವೆಂಟಿಲೇಟರ್ಗಳಿದ್ದು, 2 ಮಾತ್ರ ಬಳಕೆಯಾಗಿವೆ. 35 ಎಚ್ಎಫ್ಎನ್ಸಿ ಬೆಡ್ಗಳು ಖಾಲಿ ಇವೆ. 476 ಆಮ್ಲಜನಕ ಪೂರೈಕೆ ಹೊಂದಿರುವ ಬೆಡ್ಗಳು ಲಭ್ಯವಿದೆ. ಪ್ರತಿದಿನ ಎರಡೂವರೆ ಸಾವಿರದಿಂದ 3 ಸಾವಿರ ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಮಹಾರಾಷ್ಟ್ರ ಹಾಗೂ ಕೇರಳದಿಂದ ಜಿಲ್ಲೆಗೆ ಬರುವವರು ಕಡ್ಡಾಯವಾಗಿ 72 ಗಂಟೆ ಮೀರದಂತೆ ಕೋವಿಡ್ ನೆಗೆಟಿವ್ ವರದಿ ಹೊಂದಿರಬೇಕು ಎಂದರು.
500 ಎಕರೆಯಲ್ಲಿ ಬೃಹತ್ ಕೈಗಾರಿಕೆ
ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆಗೆ ಜಾಗ ಗುರುತಿಸುವಂತೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿದ್ದು, ಅದರಂತೆ ಜಿಲ್ಲೆಯಲ್ಲಿ ಹಡಿಲುಬಿದ್ದ ಭೂಮಿ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬ್ರಹ್ಮಾವರದ ಸರ್ಕಾರಿ ಕಾರ್ಖಾನೆ ಪುನಶ್ಚೇತನ ಸಾಧ್ಯವಾಗಿದ್ದರೆ ಆ ಜಾಗವನ್ನು ಬೃಹತ್ ಕೈಗಾರಿಕೆ ಸ್ಥಾಪನೆಗೆ ಬಳಸುವ ಪ್ರಸ್ತಾವ ಇದೆ. ಆದರೆ, ಅಂತಿಮ ನಿರ್ಧಾರವಾಗಿಲ್ಲ. ಬೃಹತ್ ಕೈಗಾರಿಕೆ ಸ್ಥಾಪನೆಯಾದರೆ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಸಿಗಲಿದೆ. ಜತೆಗೆ, ಪರಿಸರ ಸ್ನೇಹಿ ಕೈಗಾರಿಕೆ ಸ್ಥಾಪನೆಗೆ ಮಾತ್ರ ಅನುಮತಿ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ರಾಜ್ಯಕ್ಕೆ ಉಡುಪಿ ಮಾದರಿ
‘ಅರ್ಜಿ ಹಾಕದಿದ್ದರೂ ಫಲಾನುಭವಿಗಳ ಮನೆ ಬಾಗಿಲಿಗೆ ಪಿಂಚಣಿ’ ಎಂಬ ಕಾರ್ಯಕ್ರಮವನ್ನು ರಾಜ್ಯಕ್ಕೆ ಪರಿಚಯಿಸಿದ್ದು ಉಡುಪಿ. ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಪೈಲಟ್ ಕಾರ್ಯಕ್ರಮ ಅನುಷ್ಠಾನವಾಗಿದ್ದು ಕೂಡ ಉಡುಪಿಯಲ್ಲಿ. ಕಂದಾಯ ಸೇವೆ ನೀಡುವಲ್ಲಿ ಜಿಲ್ಲೆ ಸತತ 16 ತಿಂಗಳುಗಳಿಂದ, ಭೂಮಿ ಯೋಜನೆ ಅನುಷ್ಠಾನದಲ್ಲಿ ಸತತ 20 ತಿಂಗಳುಗಳಿಂದ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಸರ್ವೆ ಹಾಗೂ ಸಕಾಲ ಸೇವೆ, ಎಂಎಲ್ಎ ಫಂಡ್ ಬಳಕೆ, ಅಟಲ್ಜಿ ಜನಸ್ನೇಹಿ, ಆನ್ಲೈನ್ ಭೂ ಪರಿವರ್ತನೆ, ಕಡತ ವಿಲೇವಾರಿಯಲ್ಲಿ ಮುಂಚೂಣಿ ಜಿಲ್ಲೆಗಳ ಪಟ್ಟಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.
ಕಾರ್ಯಕ್ರಮದಲ್ಲಿ ವಾರ್ತಾಧಿಕಾರಿ ಮಂಜುನಾಥ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.