ಉಡುಪಿ: ಜೀವನ ಉತ್ತಮವಾಗಲು ಹಾಗೂ ಮನುಕುಲದ ಸರ್ವನಾಶ ತಡೆಯಲು ಮಾನವ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯ ಆಧರಿಸಿದ ಪರಿಸರ ನಾಗರಿಕತೆ ಮುಂದಿನ ದಾರಿ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟರು.
ಈಚೆಗೆ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್, ಯುನೆಸ್ಕೋ ಪೀಸ್ ಚೇರ್ ಸಹಯೋಗದೊಂದಿಗೆ ಆಯೋಜಿಸಿದ್ದ ‘ಪರಿಸರ, ಕಲೆ ಮತ್ತು ಶಾಂತಿ’ ಕುರಿತ ಎರಡು ದಿನಗಳ ಅಂತರರಾಷ್ಟ್ರೀಯ ವಿಚಾರಗೋಷ್ಠಿ ನಡೆಯಿತು.
ನಾಲ್ಕು ವಿಶೇಷ ಉಪನ್ಯಾಸಗಳು, 45 ಸಂಶೋಧನಾ ಪ್ರಬಂಧಗಳ ಮಂಡನೆ, ಸಮಕಾಲೀನ ಸಮಸ್ಯೆಗಳು ಮತ್ತು ಭವಿಷ್ಯದ ಪರ್ಯಾಯಗಳಿಗೆ ಸಂಬಂಧಿಸಿದ ಚರ್ಚೆಗಳಿಗೆ ಎರಡು ದಿನಗಳು ಸಾಕ್ಷಿಯಾದವು. ಪರಿಸರ ಮತ್ತು ಸವಾಲುಗಳು, ಸಾಮಾಜಿಕ-ಆರ್ಥಿಕ ಸಮಸ್ಯೆಗಳು, ಸಾಹಿತ್ಯ, ಸಿನಿಮಾ, ಲಿಂಗ ಅಧ್ಯಯನ, ತತ್ವಶಾಸ್ತ್ರ ಸೇರಿದಂತೆ ಹಲವು ವಿಷಯಗಳು ಕಾರ್ಯಕ್ರಮದಲ್ಲಿ ಚರ್ಚೆಯಾದವು.
ಮಾಹೆಯ ಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ. ಡಿ. ವೆಂಕಟೇಶ್ ಮಾತನಾಡಿ, ಪ್ರಸ್ತುತ ನಾವು ಎದುರಿಸುತ್ತಿರುವ ಮತ್ತು ಪರಿಹರಿಸಬೇಕಿರುವ ಸಮಸ್ಯೆಗಳನ್ನು ವೈಯಕ್ತಿಕ, ಸಾಮಾಜಿಕ-ಆರ್ಥಿಕ ಮತ್ತು ಪರಿಸರ ಸಂಬಂಧಿತ ಎಂದು ವರ್ಗೀಕರಿಸಬಹುದು. ಮಾಹೆಯು ಪ್ರಾರಂಭಿಸುತ್ತಿರುವ ಹೊಸ ಶೈಕ್ಷಣಿಕ ಕಾರ್ಯಕ್ರಮಗಳು ಈ ವಿಶಾಲ ದೃಷ್ಟಿಕೋನಕ್ಕೆ ಅನುಗುಣವಾಗಿವೆ ಎಂದರು.
ಯುನೆಸ್ಕೋ ಪೀಸ್ ಚೇರ್ನ ಪ್ರೊ.ಎಂ.ಡಿ.ನಲಪತ್ ಮಾತನಾಡಿ ‘ಭಾರತೀಯ ನಾಗರಿಕತೆಯ ಮೂಲತತ್ವ ‘ವಸುದೈವ ಕುಟುಂಬಕಂ’ ಎಂಬುದರಲ್ಲಿ ಅಡಗಿದೆ. ಗಾಂಧಿವಾದ ಕಲ್ಪನೆಯ ‘ಸೂಕ್ತ ವಿಧಾನಗಳು’ ಜೀವನದ ಪ್ರತಿ ನಡಿಗೆಯಲ್ಲಿ, ಅಂತರರಾಷ್ಟ್ರೀಯ ಸಂಬಂಧಗಳಲ್ಲಿ, ಹಾಗೂ ಈಚೆಗಿನ ಸಾಂಕ್ರಾಮಿಕ ಸಮಯದಲ್ಲೂ ಪ್ರಧಾನ ತತ್ವವಾಗಬೇಕು’ ಎಂದು ಹೇಳಿದರು.
‘ಅಂತರರಾಷ್ಟ್ರೀಯ ಶಾಂತಿಯ ಸಾಧ್ಯತೆಗಳು: ಒಂದು ಗಾಂಧಿವಾದಿ ವಿಧಾನ’ ಕುರಿತ ಉಪನ್ಯಾಸದಲ್ಲಿ, ಪತ್ರಕರ್ತ ಸುಧೀಂದ್ರ ಕುಲಕರ್ಣಿ ಮಾತನಾಡಿ, ‘ಕೈಗಾರಿಕಾ ನಾಗರಿಕತೆಗೆ ಏಕೈಕ ಪರ್ಯಾಯವೆಂದರೆ ಪರಿಸರ ನಾಗರಿಕತೆ. ಹಿಂಸೆಯ ವಿವಿಧ ಮೂಲಗಳನ್ನು ಅಹಿಂಸೆ, ಪ್ರೀತಿ ಮತ್ತು ಸಹಾನುಭೂತಿಗಳೆಂಬ ಗಾಂಧಿವಾದಿ ಮೌಲ್ಯಗಳಿಂದ ಬದಲಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.
'ದಿ ಕಾಸ್ಮೋಸ್ ಅಂಡ್ ಹ್ಯೂಮನ್ ಕಾನ್ಷಿಯಸ್ನೆಸ್: ಮೆಟಾಫಿಸಿಕಲ್ ಎಕ್ಸ್ಪ್ಲೋರೇಶನ್ಸ್ ಥ್ರೂ ಸಿನೆಮಾ' ಕುರಿತ ಉಪನ್ಯಾಸದಲ್ಲಿ ಬರಹಗಾರ ಪ್ರೊ. ಮನು ಚಕ್ರವರ್ತಿ ಮಾತನಾಡಿ, ‘ಮಾನವಕೇಂದ್ರೀಯ ದೃಷ್ಟಿಕೋನದಿಂದ, ಪ್ರಕೃತಿ ಕೇಂದ್ರಿತ ದೃಷ್ಟಿಕೋನಕ್ಕೆ ಬದಲಾವಣೆ ಹಾಗೂ ಮಾನವ-ಪ್ರಕೃತಿಯ ನಡುವಿನ ಸಾಮರಸ್ಯವು ಉತ್ತಮ ಜಗತ್ತಿಗಾಗಿ ಅತೀ ಅಗತ್ಯ ಎಂದರು.
'ಟ್ಯಾಗೋರ್ ಮತ್ತು ಪರಿಸರ: ಫಿಲಾಸಫಿ ಆಂಡ್ ಪ್ರಾಕ್ಸಿಸ್' ಕುರಿತ ಉಪನ್ಯಾಸದಲ್ಲಿ ಎಡಿನ್ಬರ್ಗ್ ನೇಪಿಯರ್ ವಿಶ್ವವಿದ್ಯಾಲಯದ ಸ್ಕಾಟಿಷ್ ಸೆಂಟರ್ ಫಾರ್ ಟ್ಯಾಗೋರ್ ಸ್ಟಡೀಸ್ನ ನಿರ್ದೇಶಕರಾದ ಡಾ. ಬಾಶಾಬಿ ಫ್ರೇಸರ್ ಮಾತನಾಡಿ, ‘ಟ್ಯಾಗೋರ್ ಅವರು ಅರಣ್ಯ ವಿಶ್ವವಿದ್ಯಾಲಯ ಮತ್ತು ಶಾಂತಿ ನಿಕೇತನದಂತಹ ಕಲ್ಪನೆಯಲ್ಲಿ ಪ್ರತಿನಿಧಿಸುವಂತೆ ಪರಿಸರ ನಾಗರಿಕತೆಗೆ ಒಲವು ಉಳ್ಳವರಾಗಿದ್ದರು. ಪ್ರಕೃತಿಯನ್ನು ಪ್ರೀತಿಸುವವರಿಗೆ ಎಂದಿಗೂ ದ್ರೋಹವಾಗಿಲ್ಲ ಎಂದು ವಿಚಾರ ಮಂಡಿಸಿದರು.
ಮಾಹೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ. ವಿನೋದ್ ಭಟ್ ಮಾತನಾಡಿ, ಜಗತ್ತು ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ಸಂಘರ್ಷಗಳ ಪರಿಹಾರಕ್ಕೆ ವಿಶ್ವವಿದ್ಯಾಲಯಗಳು ಸಂಶೋಧನೆ ಮತ್ತು ಸಂಶೋಧನಾ ಪ್ರಕಟಣೆಯ ಕುರಿತು ಗಮನಹರಿಸುವ ಅಗತ್ಯವಿದೆ ಎಂದರು.
ಜಿಸಿಪಿಎಎಸ್ ನಿರ್ದೇಶಕರಾದ ಪ್ರೊ. ವರದೇಶ್ ಹಿರೇಗಂಗೆ ಶಾಂತಿ ಮತ್ತು ಪರಿಸರದ ಪರಿಶೋಧನೆ ಮತ್ತು ಅಭಿವ್ಯಕ್ತಿಗೆ, ಕಲೆ ಒಂದು ಮಾಧ್ಯಮವಾಗಬಹುದು ಎಂದು ಸಮರ್ಥಿಸಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.