ಪಡುಬಿದ್ರಿ: ಪ್ರೀತಿಸಿ ಮದುವೆಯಾದ ಪತ್ನಿಗೆ ವಿಷ ಕೊಟ್ಟು ಪತಿ ಕೊಲೆ ಮಾಡಿರುವ ಕುರಿತು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿ ಗ್ರೌಂಡ್ ಬಳಿ, ಪೈಯ್ಯಾರ್ ರಸ್ತೆಯ ನಿವಾಸಿ ವಿದ್ಯಾ (29) ಕೊಲೆಯಾದವರು. ಬಡಾ ಗ್ರಾಮದ ಮುಳ್ಳುಗುಡ್ಡೆ ನಿವಾಸಿ ಯತಿನ್ ರಾಜ್ ಅವರನ್ನು ಪ್ರೀತಿಸಿ ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು. ಪತಿ, ಮಾವ ರಾಘು, ಅತ್ತೆ ಗೀತಾ ಮತ್ತು ಮೈದುನ ಯಕ್ಷಿತ್ ಕಿರುಕುಳ ನೀಡುತ್ತಿದ್ದರು ಎಂದು ದೂರಲಾಗಿದೆ.
ಸೆಪ್ಟೆಂಬರ್ 1ರಂದು ಸಂಜೆ ಮುಳ್ಳುಗುಡ್ಡೆಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿದ್ಯಾ ಮತ್ತು ಯತಿನ್ ಅಲ್ಲಿಗೆ ಹೋಗಿದ್ದಾರೆ. ರಾತ್ರಿ 8 ಗಂಟೆಯ ವೇಳೆ ಪಕ್ಕದ ಮನೆಯ ಉಷಾ ಅವರಲ್ಲಿಗೆ ಹೋದ ಯತಿನ್ ತಾನು ಮತ್ತು ವಿದ್ಯಾ ವಿಷ ಸೇವಿಸಿದ್ದಾಗಿ ಹೇಳಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿದ್ಯಾ ಬುಧವಾರ ಮೃತಪಟ್ಟಿದ್ದಾರೆ.
ವಿದ್ಯಾ ಅವರಿಗೆ ಯತಿನ್ ವಿಷ ಕೊಟ್ಟು ಸಂದೇಹ ಬಾರದಿರಲಿ ಎಂದು ತಾನು ಅಲ್ಪ ಪ್ರಮಾಣದಲ್ಲಿ ವಿಷ ಸೇವಿಸಿದ್ದ ಎಂದು ದೂರಲಾಗಿದೆ.