ಉಡುಪಿ: ಹೆಬ್ರಿಯ ಕುಚ್ಚೂರು ರಸ್ತೆ ಹಾಗೂ ಸಿದ್ದಾಪುರದ ಜನ್ಸಾಲೆ ವ್ಯಾಪ್ತಿಯಲ್ಲಿ ಭಾನುವಾರ ಹಾಗೂ ಸೋಮವಾರ ಮತ್ತೆರಡು ಮಂಗಗಳ ಶವ ಪತ್ತೆಯಾಗಿದೆ.
ಮತ್ತೊಂದೆಡೆ ಬ್ರಹ್ಮಾವರದಲ್ಲಿ ವ್ಯಕ್ತಿಯೊಬ್ಬರಿಗೆ ಶಂಕಿತ ಮಂಗನ ಕಾಯಿಲೆ ಗುಣಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದು ಮಂಗನ ಕಾಯಿಲೆಗೆ ನಿಯೋಜಿತಗೊಂಡ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದರು.
ಇದುವರೆಗೂ 53 ಮಂಗಗಳ ದೇಹದ ಭಾಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 12ರಲ್ಲಿ ಮಂಗನ ಕಾಯಿಲೆ ಸೋಂಕು ದೃಢಪಟ್ಟಿದೆ. ಮನುಷ್ಯರಲ್ಲಿ ಸೋಂಕು ಹರಡದಂತೆ ಜಿಲ್ಲಾ ಆರೋಗ್ಯ ಇಲಾಖೆ ಎಚ್ಚರ ವಹಿಸಿದೆ ಎಂದು ಅವರು ತಿಳಿಸಿದರು.
ಕೊಲ್ಲೂರು ವ್ಯಾಪ್ತಿಯಲ್ಲಿ ಸಂಚಾರಿ ವಾಹನದ ಮೂಲಕ ಕೆಎಫ್ಡಿ ಹರಡುವಿಕೆ ಹಾಗೂ ರೋಗ ತಡೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ತಪಾಸಣೆ ಕೂಡ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಡ್ತಲ ಗ್ರಾಮ ಪಂಚಾಯತ್ ಹಾಗೂ ಪಿಡಿಒಗಳ ಜತೆಗೂಡಿ ಕೊರಗರ ಕಾಲೋನಿಗಳಿಗೆ ಭೇಟಿ ನೀಡಿ ರೋಗದ ಕುರಿತು ಅರಿವು ಮೂಡಿಸಲಾಗುತ್ತಿದೆ. ಕಾರ್ಕಳದಲ್ಲಿ ಕಾರ್ಯಾಗಾರ ನಡೆಸಲಾಗಿದೆ ಎಂದು ತಿಳಿಸಿದರು.