ಮೂರು ತಿಂಗಳ ಹಿಂದೆ ಹೆತ್ತವರಿಗೆ ಬೇಡವಾಗಿ ಕಸದ ತೊಟ್ಟಿ ಸೇರಿದ್ದ ಅನಾಥ ಮಗುವಿನ ‘ನಾಮಕರಣ’ ಸಮಾರಂಭ ಇದು. ನಾಮಕರಣದಲ್ಲಿ ಮಗುವಿನ ಪೋಷಕರು ಇರಲಿಲ್ಲ ಎಂಬ ಕೊರತೆ ಬಿಟ್ಟರೆ ಉಳಿದೆಲ್ಲವೂ ಇತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೃಷ್ಣ ಚಾರಿಟೆಬಲ್ ಟ್ರಸ್ಟ್, ಪೊಲೀಸ್ ಇಲಾಖೆ, ನಾಗರಿಕ ಸೇವಾ ಸಮಿತಿ, ಮಕ್ಕಳ ಸಹಾಯವಾಣಿ, ಹೀಗೆ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳ ಅಧಿಕಾರಿಗಳು ಮಗುವಿನ ‘ಬಂಧುಗಳ’ ಸ್ಥಾನದಲ್ಲಿ ನಿಂತು ತೊಟ್ಟಿಲು ಶಾಸ್ತ್ರ ನೆರವೇರಿಸಿದರು.