ಉಡುಪಿ: ಲಾಕ್ಡೌನ್ನಿಂದ ₹ 400 ಕೋಟಿ ನಷ್ಟ

ಉಡುಪಿ: ಕೋವಿಡ್ ಲಾಕ್ಡೌನ್ನಿಂದಾಗಿ ರಾಜ್ಯದ ಖಾಸಗಿ ಬಸ್ ಮಾಲೀಕರು ₹ 400 ಕೋಟಿ ನಷ್ಟ ಅನುಭವಿಸಿದ್ದಾರೆ ಎಂದು ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಕ್ಸ್ಪ್ರೆಸ್ ಸಾರಿಗೆ, ಸರ್ವೀಸ್ ಬಸ್ಗಳು, ಸಿಟಿ ಬಸ್ಗಳು ಸೇರಿದಂತೆ ರಾಜ್ಯದಲ್ಲಿ 8 ಸಾವಿರಕ್ಕೂ ಅಧಿಕ ಬಸ್ಗಳಿವೆ. ಒಂದು ಬಸ್ ಸ್ಥಗಿತದಿಂದ ತಲಾ ₹ 50,000ದಿಂದ ₹1.50 ಲಕ್ಷ ನಷ್ಟವಾಗಿದೆ. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಬಸ್ ಮಾಲೀಕರು ಉದ್ಯಮ ಮುನ್ನಡೆಸುವುದು ಕಷ್ಟವಾಗಿದೆ ಎಂದರು.
ಖಾಸಗಿ ಬಸ್ ಮಾಲೀಕರ ನೆರವಿಗೆ ಧಾವಿಸುವಂತೆ ಮುಖ್ಯಮಂತ್ರಿ, ಸಾರಿಗೆ ಸಚಿವರ ಬಳಿ ಹಲವು ಬಾರಿ ಮನವಿ ಮಾಡಿದ್ದರೂ ಪ್ರಮುಖ ಬೇಡಿಕೆಗಳಿಗೆ ಸ್ಪಂದನ ಸಿಕ್ಕಿಲ್ಲ. ಕೆಎಸ್ಆರ್ಟಿಸಿಗೆ ₹ 2,380 ಕೋಟಿ ಸಹಾಯಧನ ನೀಡಿರುವ ಸರ್ಕಾರ ಖಾಸಗಿ ಬಸ್ ಮಾಲೀಕರಿಗೆ ಆರ್ಥಿಕ ನೆರವು ನೀಡಲಿಲ್ಲ ಎಂದರು.
ಲಾಕ್ಡೌನ್ ಅವಧಿಯಲ್ಲಿ ಬಸ್ ಸೆರೆಂಡರ್ ಮಾಡಿದಾಗ ಮಾತ್ರ ತೆರಿಗೆ ವಿನಾಯಿತಿ ಸಿಕ್ಕಿದೆ. ಜುಲೈನಿಂದ ಡಿಸೆಂಬರ್ವರೆಗಿನ 6 ತಿಂಗಳ ₹ 80 ಕೋಟಿ ತೆರಿಗೆ ವಿನಾಯಿತಿಯನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.
ಕೆಎಸ್ಆರ್ಟಿಸಿ ಬಸ್ಗಳ ಸಂಚರಿಸುವ ಮಾರ್ಗದಲ್ಲಿ ಖಾಸಗಿ ಬಸ್ಗಳನ್ನು ಓಡಿಸಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದ್ದರೂ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಈ ಬಗ್ಗೆ ಸರ್ಕಾರ ಪರಿಶೀಲಿಸಿ ಅನುಮತಿ ನೀಡಿದರೆ ಅನುಕೂಲವಾಗಲಿದೆ. ಖಾಸಗಿ ಬಸ್ಗಳು ಓಡುವ ಮಾರ್ಗದಲ್ಲಿ ಕೆಎಸ್ಆರ್ಟಿಸಿ ಬಸ್ಗಳ ದರ ಕಡಿಮೆ ಮಾಡುವ ಮೂಲಕ ದರ ಸಮರಕ್ಕೆ ಇಳಿಯಲಾಗಿದೆ. ಖಾಸಗಿ ಬಸ್ಗಳು ಸಂಚರಿಸಲದ ಕಡೆಗಳಲ್ಲಿ ಮಾತ್ರ ಹೆಚ್ಚಿನ ಟಿಕೆಟ್ ದರ ಪಡೆಯಲಾಗುತ್ತಿದೆ. ಸರ್ಕಾರದ ಇಬ್ಬಗೆಯ ನೀತಿ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಿಸೇಲ್ ಬೆಲೆ ಏರಿಕೆಯಾಗಿದ್ದು, ಹೆಚ್ಚುವರಿ ಪ್ರತಿ ಕಿ.ಮೀ. 4 ರಿಂದ 20 ಪೈಸೆ ಸೆಸ್ ವಿಧಿಸಲು ಸರ್ಕಾರ ಅವಕಾಶ ನೀಡಿದೆ. ಲಾಕ್ಡೌನ್ ಸಡಿಲಗೊಂಡರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ ಪ್ರಸ್ತುತ ದರದಲ್ಲಿ ಬಸ್ಗಳನ್ನು ಓಡಿಸುವುದು ಸಾಧ್ಯವಿಲ್ಲ. ಮುಂದೆ ಶೇ 20ರಷ್ಟು ದರ ಹೆಚ್ಚಿಸುವುದು ಅನಿವಾರ್ಯವಾಗಲಿದೆ ಎಂದರು.
ಒಕ್ಕೂಟದ ಉಪಾಧ್ಯಕ್ಷ ಸದಾನಂದ ಛಾತ್ರ, ಪ್ರಧಾನ ಕಾರ್ಯದರ್ಶಿ ಕೆ.ಕೆ. ಬಾಲಕೃಷ್ಣ, ಕಾರ್ಯಾಧ್ಯಕ್ಷ ಲಿಂಗಾರೆಡ್ಡಿ, ಕಾರ್ಯದರ್ಶಿ ವಿಕ್ರಂ, ಗೌರವ ಸಲಹೆಗಾರ ಜಯಪ್ರಕಾಶ್ ಶೆಣೈ, ಖಜಾಂಚಿ ದಿಲ್ರಾಜ್ ಆಳ್ವ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.