ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಮಾನವೀಯತೆ ಮೆರೆದ ಆರಕ್ಷಕ ಉದಯ್‌ ಶೆಟ್ಟಿ

Last Updated 1 ಜನವರಿ 2021, 1:30 IST
ಅಕ್ಷರ ಗಾತ್ರ

ಕೋವಿಡ್‌ ಕಾಣಿಸಿಕೊಂಡಾಗ ಸೋಂಕು ಹರಡುವಿಕೆ ತಡೆಗೆ ದೇಶದಾದ್ಯಂತ ಲಾಕ್‌ಡೌನ್‌ ಜಾರಿ ಮಾಡಲಾಯಿತು. ಆರಂಭದಲ್ಲಿ ಸೋಂಕಿನ ಬಗ್ಗೆ ಇದ್ದ ಅಸಡ್ಡೆಯ ಪರಿಣಾಮ ಲಾಕ್‌ಡೌನ್ ನಿಯಮಗಳನ್ನು ಗಾಳಿಗೆ ತೂರಿ ಸಾರ್ವಜನಿಕರಿಗೆ ಎಲ್ಲೆಂದರಲ್ಲಿ ಅಡ್ಡಾಡಲು ಆರಂಭಿಸಿದರು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಾಗರಿಕರನ್ನು ಸೋಂಕಿಗೆ ತುತ್ತಾಗದಂತೆ ತಡೆಯಲು ಅವರನ್ನು ಮನೆಯಲ್ಲಿಯೇ ಉಳಿಯುವಂತೆ ಮಾಡುವಲ್ಲಿ ಪೊಲೀಸ್ ಇಲಾಖೆ ಶ್ರಮ ದೊಡ್ಡದು.

ಲಾಕ್‌ಡೌನ್ ಜಾರಿಯಲ್ಲಿದ್ದಷ್ಟು ದಿನ ಸಾರ್ವಜನಿಕರು ಮನೆಯಲ್ಲಿದ್ದರೆ, ಪೊಲೀಸರು ಬೀದಿಗಳಲ್ಲಿ ನಿಂತು ಕರ್ತವ್ಯ ನಿರ್ವಹಿಸಿದರು. ಈ ಸಂದರ್ಭ ಹಲವರಿಗೆ ಸೋಂಕು ತಗುಲಿದರೂ ದೃತಿಗೆಡದೆ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದರು. ಅಂಥವರಲ್ಲಿ ಕಾರ್ಕಳದ ಗ್ರಾಮಾಂತರ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಉದಯ್‌ ಕುಮಾರ್ ಶೆಟ್ಟಿ.

ಶಾಂತಿ ಸುವ್ಯವಸ್ಥೆಯ ಹೊಣೆಗಾರಿಕೆ ಮಾತ್ರವಲ್ಲ; ಮಾನವೀಯ ಕಾರ್ಯವೂ ಕರ್ತವ್ಯದ ಭಾಗ ಎಂದು ಅರಿತ ಉದಯ್ ಶೆಟ್ಟಿ, ಲಾಕ್‌ಡೌನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ನೂರಾರು ಮಂದಿಗೆ ಆಹಾರದ ಕಿಟ್‌ಗಳನ್ನು ಪೂರೈಸಿದ್ದಾರೆ. ಪರಿಚಿತ ದಾನಿಗಳನ್ನೆಲ್ಲ ಒಟ್ಟುಗೂಡಿಸಿ ಅವರಿಂದಲೂ ಆಹಾರದ ಕಿಟ್‌ಗಳನ್ನು ಹಂಚಿಸಿದ್ದಾರೆ.

ಗ್ರಾಮಾಂತರ ಠಾಣೆಯಲ್ಲಿದ್ದ ಕಾರಣ ಸಹಜವಾಗಿ ಹಳ್ಳಿಗಾಡಿನ ಜನರ ಕಷ್ಟಗಳ ಅರಿವಿದ್ದ ಉದಯ್ ಶೆಟ್ಟಿ, ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಗಳನ್ನು ಗುರುತಿಸಿ ಖುದ್ದು ಆಹಾರದ ಪೊಟ್ಟಣಗಳನ್ನು ಹೊತ್ತು ಮನೆಗೆ ತಲುಪಿಸಿದ್ದಾರೆ. ಜತೆಗೆ, ಕೋವಿಡ್‌ ಸೋಂಕಿನ ಕುರಿತು ಜಾಗೃತಿಯನ್ನೂ ಮೂಡಿಸಿದ್ದಾರೆ. ಪ್ರತಿನಿತ್ಯ ಆಹಾರಕ್ಕಾಗಿ ನಿರಂತರವಾಗಿ ಕರೆಗಳು ಬರುತ್ತಿತ್ತು. ಕಅವರಿಗೆಲ್ಲ ಆಹಾರದ ಪೊಟ್ಟಣಗಳನ್ನು ತಲುಪಿಸಿದ್ದೇನೆ. ಈ ಕಾರ್ಯಕ್ಕೆ ಕಾರ್ಕಳದ ದಾನಿಗಳ ಸಹಕಾರ ಬಹಳ ದೊಡ್ಡದು ಎಂದು ಸ್ಮರಿಸುತ್ತಾರೆ ಉದಯ್ ಶೆಟ್ಟಿ.

ಲಾಕ್‌ಡೌನ್ ಅವಧಿಯಲ್ಲಿ ಸೋಂಕಿನ ಬಗ್ಗೆ ಅಸಡ್ಡೆಯಿಂದ ಕೆಲವರು ಹೊರಗೆ ಬರುತ್ತಿದ್ದವರು. ಅಂಥವರಿಗೆಲ್ಲ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದರು. ಆದರೆ, ದಂಡ ಪ್ರಯೋಗದಲ್ಲಿ ನಂಬಿಕೆ ಇಲ್ಲದ ನಾನು ಜನರ ಮನಃಪರಿವರ್ತನೆಗೆ ಅಹಿಂಸೆಯ ಮಾರ್ಗ ಆಯ್ದುಕೊಂಡೆ. ಮನೆಯಿಂದ ಹೊರಬಾರದಂತೆ, ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡದಂತೆ ಜನರಿಗೆ ಕೈಮುಗಿದು ಕೇಳಿಕೊಂಡೆ. ನನ್ನ ಮನವಿಗೆ ಜನರು ಸ್ಪಂದಿಸಿದರು ಎಂದರು ಉದಯ್ ಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT