ಉಡುಪಿ: ಪೊಗುರು ಸಿನಿಮಾ ಹಿಂದೂ ಸಮಾಜದ ಭಾವನೆಗಳಿಗೆ ಧಕ್ಕೆ ತಂದಿದ್ದು, ಪೂಜಾ ಪದ್ಧತಿ, ಆಚಾರ, ವಿಚಾರಗಳನ್ನು ಅವಮಾನಿಸಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಖಂಡಿಸಿದ್ದಾರೆ.
ವಿವಾದಾತ್ಮಕ ದೃಶ್ಯಗಳಿಂದ ಪ್ರಚಾರ ಗಿಟ್ಟಿಸಿಕೊಳ್ಳಬಹುದು ಎಂಬ ಪೊಗರು ಸಿನಿಮಾ ತಂಡದ ಮನಸ್ಥಿತಿಯನ್ನು ಎಲ್ಲರೂ ವಿರೋಧಿಸಬೇಕು. ಪೊಗರು ಚಿತ್ರ ಪ್ರದರ್ಶನಕ್ಕೆ ತೀವ್ರ ವಿರೋಧವಿದ್ದು, ತಕ್ಷಣ ಪ್ರದರ್ಶನ ನಿಲ್ಲಿಸಬೇಕು. ಸಿನಿಮಾವನ್ನು ಸೆನ್ಸಾರ್ಗೊಳಪಡಿಸಿ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಿದ ಬಳಿಕ ಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡಬೇಕು ಎಂದು ಶೋಭಾ ಒತ್ತಾಯಿಸಿದ್ದಾರೆ.
ಬೇರೆ ಧರ್ಮಗಳನ್ನು ನಿಂದಿಸುವ ದೃಶ್ಯಗಳನ್ನು ತೋರಿಸುವ ಧೈರ್ಯ ಚಿತ್ರತಂಡಕ್ಕೆ ಇಲ್ಲ. ಹಿಂದೂಗಳ ಭಾವನೆಗೆ ದಕ್ಕೆ ತಂದಿರುವ ಸಿನಿಮಾವನ್ನು ಸಮಾಜ ಸಂಘಟಿತವಾಗಿ ವಿರೋಧಿಸಬೇಕು ಎಂದು ಒತ್ತಾಯಿಸಿದ್ದಾರೆ.