ಗೃಹ ಜ್ಯೋತಿ ಕಾರ್ಯಕ್ರಮದಡಿ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಿಲ್ಲ, ಪ್ರತಿ ಯುನಿಟ್ಗೆ ₹ 2ರಂತೆ ವಿದ್ಯುತ್ ದರ ಹೆಚ್ಚಿಸಲಾಗಿದೆ, ಸರ್ಕಾರಿ ಬಸ್ಗಳ ಓಡಾಟ ಇಲ್ಲದ ಕಡೆಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಲಾಭ ಸಿಗುವುದಿಲ್ಲ. ಗೃಹಲಕ್ಷ್ಮಿ ಕಾರ್ಯಕ್ರಮ ಮುಂದೂಡಿ, ಗೊಂದಲ ಸೃಷ್ಟಿಸಿ, ಆನ್ ಲೈನ್ ಅರ್ಜಿ ಎಂಬ ಸಬೂಬು ನೀಡಿ ಕಾಲಹರಣ ಮಾಡುತ್ತಿದೆ. ಅನ್ನಭಾಗ್ಯ ಗ್ಯಾರಂಟಿ ಮುಂದೂಡಿ ಈಗಾಗಲೇ ಕೇಂದ್ರ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ ನೀಡುತ್ತಿರುವ ಉಚಿತ 5 ಕೆ.ಜಿ ಅಕ್ಕಿಯನ್ನು ಸೇರಿಸಿ 10 ಕೆ.ಜಿ ಕೊಡುವುದಾಗಿ ಮೋಸದ ತಂತ್ರ ಅನುಸರಿಸಿದೆ. ಎಲ್ಲ ನಿರುದ್ಯೋಗಿಗಳಿಗೆ ಮಾಸಾಶನ ಕೊಡುತ್ತಿಲ್ಲ, ಅಧಿಕಾರದ ದುರಾಸೆಯಿಂದ ಉಚಿತ ಗ್ಯಾರಂಟಿ ಘೋಷಿಸಿ ರಾಜ್ಯವನ್ನು ದಿವಾಳಿಯಾಗಿಸಲು ಹೊರಡುತ್ತಿದೆ. ಗ್ಯಾರಂಟಿ ಅನುಷ್ಠಾನಕ್ಕೆ ಆದಾಯದ ಮೂಲ ಸ್ಪಷ್ಟಪಡಿಸಿ ಶ್ವೇತಪತ್ರವನ್ನು ಹೊರಡಿಸಬೇಕು ಎಂದು ಕುಯಿಲಾಡಿ ಆಗ್ರಹಿಸಿದ್ದಾರೆ.