ಉಡುಪಿ: ಕೊಂಕಣ ರೈಲು ಮಾರ್ಗದ ಇನ್ನಂಜೆ ಹಾಗೂ ಪಡುಬಿದ್ರಿ ನಡುವಿನ ರೈಲ್ವೆ ಹಳಿಯಲ್ಲಿ ವೆಲ್ಡಿಂಗ್ ಜಾಯಿಂಟ್ ಬಿಟ್ಟಿರುವುದನ್ನು ಪತ್ತೆ ಹಚ್ಚುವ ಮೂಲಕ ರೈಲ್ವೆ ಜಾಗೃತ ಹಳಿ ನಿರ್ವಾಹಕ ಪ್ರದೀಪ್ ಶೆಟ್ಟಿ ಸಂಭಾವ್ಯ ಅವಘಡ ತಪ್ಪಿಸಿದ್ದಾರೆ.
ಮಧ್ಯರಾತ್ರಿ 2.25ರ ಸುಮಾರಿಗೆ ಹಳಿ ಜಾಯಿಂಟ್ ಬಿಟ್ಟಿರುವುದನ್ನು ಗಮನಿಸಿದ ಪ್ರದೀಪ್ ಶೆಟ್ಟಿ, ತಕ್ಷಣ ಉಡುಪಿಯ ಆರ್ಎಂಇ ಗಮನಕ್ಕೆ ತಂದಿದ್ದಾರೆ. ಕೂಡಲೇ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹಳಿ ದುರಸ್ತಿಗೊಳಿಸಿ ಸಮಸ್ಯೆ ಪರಿಹರಿಸಿದ್ದಾರೆ. ದುರಸ್ತಿ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರ ವ್ಯತ್ಯಯ ವಾಗಿದ್ದು, ರೈಲುಗಳನ್ನು ಉಡುಪಿ ಹಾಗೂ ಸುರತ್ಕಲ್ ನಿಲ್ದಾಣಗಳಲ್ಲಿ ಕೆಲಹೊತ್ತು ತಡೆ ಹಿಡಿಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಹುಮಾನ ಘೋಷಣೆ: ಜಾಗೃತ ಹಳಿ ನಿರ್ವಾಹಕ ಪ್ರದೀಪ್ ಶೆಟ್ಟಿ ಅವರ ಕರ್ತವ್ಯಕ್ಕೆ ಮೆಚ್ಚಿ ಕೊಂಕಣ ರೈಲ್ವೆಯ ನೂತನ ಸಿಎಂಡಿ ಸಂತೋಷ ಕುಮಾರ್ ಝಾ ₹25 ಸಾವಿರ ನಗದು ಬಹುಮಾನ ಘೋಷಿಸಿದ್ದರು. ಅದರಂತೆ ಉಡುಪಿಯ ಹಿರಿಯ ಎಂಜಿನಿಯರ್ ಗೋಪಾಲಕೃಷ್ಣ ಹಳಿ ದುರಸ್ತಿ ನಡೆದ ಸ್ಥಳದಲ್ಲಿಯೇ ಪ್ರದೀಪ್ ಶೆಟ್ಟಿ ಅವರಿಗೆ ಬಹುಮಾನದ ಚೆಕ್ ಹಸ್ತಾಂತರಿಸಿ ಶ್ಲಾಘಿಸಿದರು.