ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿಯಾಳ: ಕೂಲಿ ಕಾರ್ಮಿಕನಾಗುವ ಸಹ ನಿರ್ದೇಶಕ!

ಇಟ್ಟಂಗಿ ಭಟ್ಟಿಗಳಲ್ಲಿ ದುಡಿಯುವ ಪ್ರಕಾಶ ಭೀಮಪ್ಪ ಹೆಗಡಿಹಾಳ
Last Updated 29 ಏಪ್ರಿಲ್ 2020, 3:43 IST
ಅಕ್ಷರ ಗಾತ್ರ

ಹಳಿಯಾಳ: ಈ ಶ್ರಮಜೀವಿ ಕನ್ನಡ, ಮರಾಠಿ, ಹಿಂದಿ ಚಲನಚಿತ್ರಗಳಲ್ಲಿ ವಿಲನ್‌ ಪಾತ್ರಗಳಲ್ಲಿ ನಟಿಸಿದ್ದಾರೆ. ಹಲವು ಸಿನಿಮಾ, ಧಾರಾವಾಹಿಗಳಲ್ಲಿ ಸಹಾಯಕನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಆ ಕಾರ್ಯ ಮುಗಿದ ಬಳಿಕ ಕುಟುಂಬದೊಂದಿಗೆ ಇಟ್ಟಂಗಿ ಭಟ್ಟಿಗಳಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಾರೆ!

ತುಮಕೂರಿನ ಪ್ರಕಾಶ ಭೀಮಪ್ಪ ಹೆಗಡಿಹಾಳ ಎಂಬುವವರು ಕಳೆದ ವರ್ಷ ನವೆಂಬರ್‌ನಿಂದ ಕೆಸರೊಳ್ಳಿ ಗ್ರಾಮದಲ್ಲಿ ಕೂಲಿ ಕಾರ್ಮಿಕರಾಗಿದ್ದಾರೆ. ಇಲ್ಲಿನಮಿನಿನ್ಪೌಲ್ಸೋಜ ಅವರ ಇಟ್ಟಂಗಿ ಭಟ್ಟಿಯಲ್ಲಿ ದುಡಿಯುತ್ತಿದ್ದಾರೆ. ಮಾರ್ಚ್ ಎರಡನೇ ವಾರದಲ್ಲಿ ಇಟ್ಟಿಗೆ ತಯಾರಿಸುವ ಕಾರ್ಯ ಪೂರ್ಣಗೊಂಡು ತಮ್ಮೂರಿಗೆ ವಾಪಸ್ ಹೋಗಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಅಷ್ಟರಲ್ಲಿ ದೇಶವಿಡೀ ಲಾಕ್‌ಡೌನ್ ಆಗಿ, ಕುಟುಂಬದ ಒಂಬತ್ತು ಮಂದಿಯೊಂದಿಗೆ ಇಲ್ಲೇ ಬಾಕಿಯಾದರು.

‘ಸಿನಿಮಾ, ಧಾರಾವಾಹಿಗಳ ಚಿತ್ರೀಕರಣ ಸಂದರ್ಭದಲ್ಲಿ ನಟಿಸಲು ಹಾಗೂ ನಿರ್ದೇಶಿಸಲು ನಿರ್ಮಾ‍ಪಕರಿಂದ ಕರೆ ಬಂದಾಗ ಹೋಗುತ್ತೇನೆ. ಇನ್ನುಳಿದ ದಿನಗಳಲ್ಲಿ ಕೂಲಿಯಾಗಿ ದುಡಿಯುತ್ತೇನೆ. ನಮ್ಮ ಕುಟುಂಬವುಈ ಹಿಂದಿನಿಂದಲೂ ಇಟ್ಟಿಗೆ ತಯಾರಿಕೆಯನ್ನೇ ಅವಲಂಬಿತವಾಗಿದೆ. ಬಣ್ಣದ ಜಗತ್ತಿನಿಂದ ಕುಟುಂಬದ ನಿರ್ವಹಣೆಯಾಗುವುದಿಲ್ಲ. ಹಾಗಾಗಿ ಕೂಲಿ ಕೆಲಸ ಮಾಡಬೇಕಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

ಹಲವು ಸಿನಿಮಾಗಳಲ್ಲಿ ನಟನೆ:ವಾಣಿಜ್ಯ ವಿಷಯದಲ್ಲಿ ಪದವೀಧರನಾಗಿರುವ ಅವರು, ಕಂಪ್ಯೂಟರ್ ಕಲಿಕೆಯಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡಿದ್ದಾರೆ.‘ಕೆ.ಜಿ.ಎಫ್ 2’, ‘ದಬಾಂಗ್ 3’, ‘ರೌಡಿ ದ್ಯೊಂಡ್ಯಾ’, ‘ಹತ್ಯಾಕಾಂಡ’ ಚಲನಚಿತ್ರಗಳಲ್ಲಿ, ‘ಸಾವಧಾನ್ ಇಂಡಿಯಾ’, ‘ಕ್ರೈಂ ಸ್ಟೋರಿ’ ಮತ್ತಿತರ ಧಾರಾವಾಹಿಗಳಲ್ಲಿ ನಟನಾಗಿ ಬಣ್ಣ ಹಚ್ಚಿದ್ದಾರೆ.

ಪ್ರಕಾಶನಟಿಸಿರುವ ಮರಾಠಿಯ ‘ಮೀ ತುಜಾ ಹೀರೋ ವಾಟತೋ’, ‘ತುಲಾ ಪೀರುವುನ್ ಮಾಜಾ ಗಾಡಿವರ’, ‘ಪಾಕೀಟಚ ಧಾರು ಪೀವುದೇ’ ಗೀತೆಗಳು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧವಾಗಿವೆ.

ಒಂಬತ್ತು ಮಂದಿಯ ಕುಟುಂಬ:‘ಒಂಬತ್ತು ಸದಸ್ಯರ ಪೈಕಿ ನಾಲ್ವರುದುಡಿಯುವವರು,ಐವರು ಚಿಕ್ಕ ಮಕ್ಕಳಿದ್ದಾರೆ. ಸಕಾಲಕ್ಕೆ ಅವರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದೇವೆ. ಕಂದಾಯ ಇಲಾಖೆಯಿಂದ ಅಕ್ಕಿ, ಗೋಧಿ ಪೂರೈಸಲಾಗಿದೆ. ವಿವಿಧ ಸಂಘ ಸಂಸ್ಥೆಗಳು, ಪ್ರಮುಖರುಅಗತ್ಯ ವಸ್ತು ಹಾಗೂ ದಿನಸಿ ನೀಡಿದ್ದಾರೆ’ ಎಂದು ಮಿನಿನ್ಪೌಲ್ಸೋಜ ಹೇಳಿದರು.

‘ಕೆಸರೊಳ್ಳಿ ಇಟ್ಟಿಗೆ ಭಟ್ಟಿಯ ಎಲ್ಲ ಕಾರ್ಮಿಕರಆರೋಗ್ಯವನ್ನು ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಪ್ರಾಥಮಿಕ ಆರೋಗ್ಯ ಇಲಾಖೆಯವರು ತಪಾಸಣೆ ಮಾಡಿದ್ದಾರೆ. ಅವರ ಬಗ್ಗೆ ತಹಶೀಲ್ದಾರರ ಮುಖಾಂತರ ಜಿಲ್ಲಾಧಿಕಾರಿಗೆ ವರದಿ ಕಳುಹಿಸುತ್ತಿದ್ದೇವೆ’ ಎಂದೂ ಹೇಳಿದರು.

ಊರಿಗೆ ಕಳುಹಿಸಲು ವ್ಯವಸ್ಥೆ:‘ಪ್ರಕಾಶ ಭೀಮಪ್ಪಾ ಹೆಗಡಿಹಾಳ ಅವರ ಕುಟುಂಬಕ್ಕೆ ತುಮಕೂರಿಗೆ ತೆರಳಲು ಜಿಲ್ಲಾಧಿಕಾರಿ ಪರವಾನಗಿ ನೀಡಿದ್ದಾರೆ. ಅವರನ್ನು ರಾಜ್ಯ ರಸ್ತೆ ಸಾರಿಗೆಬಸ್ ಮೂಲಕ ಏ.28ರಂದು ಕಳುಹಿಸಿಕೊಡಲಾಗಿದೆ’ಎಂದು ಕೆಸರೊಳ್ಳಿ ಗ್ರಾಮ ಲೆಕ್ಕಾಧಿಕಾರಿ ಲಕ್ಷ್ಮಿ ನೀರಲಕೇರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT