ಮುಂಡಗೋಡ (ಉತ್ತರ ಕನ್ನಡ ಜಿಲ್ಲೆ): ಅವಧಿ ಮುನ್ನ ಜನಿಸಿದ (ಪ್ರಸವ ಪೂರ್ವ) ಆನೆ ಮರಿಯೊಂದು ತಾಲ್ಲೂಕಿನ ಬಾಳೆಹಳ್ಳಿ ಅರಣ್ಯ ಪ್ರದೇಶದಲ್ಲಿ ಗುರುವಾರ ಮೃತಪಟ್ಟಿದೆ.
ಸುಮಾರು ಒಂದು ವರ್ಷದ ಗಂಡು ಮರಿ ಇದಾಗಿದೆ. ಬುಧವಾರ ರಾತ್ರಿ ನಾಲ್ಕೈದು ಆನೆಗಳ ಹಿಂಡು ಕೆರೆಯ ಪಕ್ಕದ ಅರಣ್ಯದಲ್ಲಿ ಬೀಡು ಬಿಟ್ಟಿವೆ. ತೀವ್ರ ನೋವಿನಿಂದ ಬಳಲಿರುವ ತಾಯಿ ಆನೆ ಹತ್ತಾರು ಮೀಟರ್ ಅಂತರದಲ್ಲಿ ಹೊರಳಾಡಿದೆ. ಸುತ್ತಲಿನ ಸಣ್ಣ ಗಿಡಮರಗಳು ಮುರಿದಿರುವುದು ಕಂಡುಬಂದಿದೆ. ಮಧ್ಯರಾತ್ರಿ ಸಮಯದಲ್ಲಿ ಆನೆಯ ಚೀರಾಟ ಸನಿಹದ ಉಗ್ಗಿನಕೇರಿ ಗ್ರಾಮಸ್ಥರಿಗೂ ಕೇಳಿದೆ.
ಮರಿ ಆನೆಯ ಹತ್ತಿರ ಬಂದು ತಾಯಿ ಆನೆಯು ಸೊಂಡಿಲಿನಿಂದ ಸ್ಪರ್ಶಿಸುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.
‘ಗುಂಜಾವತಿ ಅರಣ್ಯ ವ್ಯಾಪ್ತಿಯ ಬಾಳೆಹಳ್ಳಿ ಪ್ರದೇಶದಲ್ಲಿ ಆನೆಯೊಂದು, ಅವಧಿಗೂ ಮುನ್ನ ಮರಿಗೆ ಜನ್ಮ ನೀಡಿದೆ. ಆದರೆ, ಸರಿಯಾಗಿ ಬೆಳವಣಿಗೆ ಆಗದ ಕಾರಣ ಮರಿ ಆನೆ ಜನಿಸುವಾಗಲೇ ಸತ್ತಿದೆ’ ಎಂದು ಎಸಿಎಫ್ ಎಸ್.ಎಂ.ವಾಲಿ 'ಪ್ರಜಾವಾಣಿ'ಗೆ ತಿಳಿಸಿದರು.
ಶಾಸಕ ಶಿವರಾಮ ಹೆಬ್ಬಾರ್ ಭೇಟಿ ನೀಡಿ, ಮರಿ ಆನೆಗೆ ಕೈ ಮುಗಿದರು. ಎಸಿಎಫ್ ಎಸ್.ಎಂ.ವಾಲಿ, ಆರ್ಎಫ್ಓ ಸುರೇಶ ಕುಲ್ಲೋಳ್ಳಿ ಭೇಟಿ ನೀಡಿದರು.