ಕಾರವಾರ: ತಾಲ್ಲೂಕಿನ ಮಾಜಾಳಿಯ ಅರಣ್ಯ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಕಾರ್ಯಾಚರಣೆ ಮಾಡಿದ ಕಾರವಾರ ವಲಯದ ಅಬಕಾರಿ ಇಲಾಖೆ ಅಧಿಕಾರಿಗಳು, ಬರೋಬ್ಬರಿ ರೂ.6.70 ಲಕ್ಷ ಮೌಲ್ಯದ ಅಕ್ರಮ ಮದ್ಯವನ್ನು ವಶ ಪಡಿಸಿಕೊಂಡಿದ್ದಾರೆ. ಎಲ್ಲವೂ ಗೋವಾದಲ್ಲಿ ತಯಾರಾಗಿದ್ದು, 64 ಗೋಣಿಚೀಲಗಳಲ್ಲಿ ತುಂಬಿಡಲಾಗಿತ್ತು.
ರಾಷ್ಟ್ರೀಯ ಹೆದ್ದಾರಿ 66ರಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿ ಕಾಡಿನ ನಡುವೆ ಮದ್ಯವನ್ನು ಬಚ್ಚಿಡಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳ ತಂಡ, ಯಶಸ್ವಿ ಕಾರ್ಯಾಚರಣೆ ಮಾಡಿತು. ಅವುಗಳಲ್ಲಿ 1,423 ಲೀಟರ್ ಮದ್ಯ 288 ಲೀಟರ್ ಬಿಯರ್ ಪತ್ತೆಯಾಗಿದೆ. ಎಲ್ಲವನ್ನೂ ರಾತ್ರಿ ತಲೆಹೊರೆಯ ಮೇಲೆ ತಂದ ಸಿಬ್ಬಂದಿ, ಅಧಿಕಾರಿಗಳ ವಶಕ್ಕೆ ನೀಡಿದರು.
ಈ ಬಗ್ಗೆ ಮಾಹಿತಿ ನೀಡಿದ ಅಬಕಾರಿ ಇಲಾಖೆ ನಿರೀಕ್ಷಕ ದಯಾನಂದ ಎಸ್.ಬಿ, 'ಗಿರಿಜಾ ಸೈಲ್ ಎಂಜಿಯರಿಂಗ್ ಕಾಲೇಜು ಬಳಿಯ ಕಾಡಿನಲ್ಲಿ ಗೋವಾ ಮದ್ಯ ತುಂಬಿದ ಮೂಟೆಗಳಿದ್ದವು. ಆರೋಪಿಗಳಿಗೆ ಹುಡುಕಾಟ ನಡೆಸಲಾಗಿದ್ದು, ಶೀಘ್ರವೇ ಬಂಧಿಸಲಾಗುವುದು' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಬಕಾರಿ ಇಲಾಖೆ ಉಪ ಆಯುಕ್ತ ಶಿವನಗೌಡ ಪಾಟೀಲ ಮಾರ್ಗದರ್ಶನದಲ್ಲಿ ಉಪ ಅಧೀಕ್ಷಕಿ ಸುವರ್ಣಾ ಬಿ ನಾಯ್ಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಅಬಕಾರಿ ನಿರೀಕ್ಷಕರಾದ ದಯಾನಂದ ಎಸ್.ಬಿ, ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕರಾದ ಬಸವರಾಜ ಕರವಿನಕೊಪ್ಪ, ಸಿಬ್ಬಂದಿ ಶಿವಾನಂದ ಕೊರಡ್ಡಿ, ಚಂದ್ರಶೇಖರ ಪಾಟೀಲ್, ಪ್ರವೀಣ ಕುಮಾರ್ ಕಲ್ಲೊಳ್ಳಿ, ವೀರೇಶ, ನಾಗರಾಜ, ಶ್ರೀನಿವಾಸ, ರವಿ ನಾಯ್ಕ, ಇಮ್ತಿಯಾಜ್ ತಂಡದಲ್ಲಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.