ಶಿರಸಿ: ‘ಅರಣ್ಯ ಭೂಮಿ ಹಕ್ಕಿಗಾಗಿ ಕಾನೂನಾತ್ಮಕ ಮತ್ತು ಸಂಘಟನಾತ್ಮಕ ಹೋರಾಟ ಅತ್ಯಗತ್ಯವಾಗಿದ್ದು ಹೋರಾಟ ನಿರಂತರವಾಗಿರಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಎನ್.ಹೆಗಡೆ ದೊಡ್ನಳ್ಳಿ ಹೇಳಿದರು.
ತಾಲ್ಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅರಣ್ಯವಾಸಿಗಳನ್ನು ಉಳಿಸಿ ಜಾಗೃತಿ ಜಾಥಾದ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಸ್ವಂತ ಭೂಮಿ ಮಾನವನ ಅಭಿವೃದ್ಧಿಯ ಸಂಕೇತ. ಸ್ವಂತ ಭೂಮಿಗಾಗಿ ಹೋರಾಟ ಅರಣ್ಯವಾಸಿಗಳಿಗೆ ಅನಿವಾರ್ಯ’ ಎಂದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ, ‘ಸುಪ್ರೀಂ ಕೋರ್ಟ್ಗೆ ರಾಜ್ಯ ಸರ್ಕಾರದ ಪ್ರಮಾಣ ಪತ್ರ ಸಲ್ಲಿಸುವವರೆಗೂ ಅರಣ್ಯವಾಸಿಗಳ ಹೋರಾಟ ಮುಂದುವರಿಯಲಿದೆ’ ಎಂದರು.
ದೊಡ್ನಳ್ಳಿ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಹೆಗಡೆ, ನಿರ್ದೇಶಕ ರಾಜು ನರೇಬೈಲ್, ಬಶೀರ್ ಸಾಬ, ಗಂಗೂಬಾಯಿ, ಬಂಗಾರ್ಯಾ ಜೋಗಿ, ತುಕರಾಮ ನರೇಬೈಲ್, ಶೇಖರ್ ಕುಪ್ಪಳ್ಳಿ, ಜಿತೇಂದ್ರ ಚಲವಾದಿ,ರಾಮಣ್ಣ ಇದ್ದರು.