ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಕಾಯಂಗೆ ಆಗ್ರಹಿಸಿ ಮುಷ್ಕರ ಆರಂಭಿಸಿದ ಅರಣ್ಯ ಇಲಾಖೆ ಗುತ್ತಿಗೆ ನೌಕರರು

Last Updated 7 ಅಕ್ಟೋಬರ್ 2020, 20:30 IST
ಅಕ್ಷರ ಗಾತ್ರ

ದಾಂಡೇಲಿ: ಪೂರ್ಣ ವೇತನ ಪಾವತಿ, ಕೆಲಸವನ್ನು ಕಾಯಂಗೊಳಿಸುವುದು, ಸೇವಾ ಭದ್ರತೆ ಮತ್ತು ನೌಕರರ ವಜಾ ವಿರೋಧಿಸಿ ಅರಣ್ಯ ಇಲಾಖೆಯ ಗುತ್ತಿಗೆ ನೌಕರರು ನಗರದಲ್ಲಿ ಬುಧವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.

ರಾಜ್ಯ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ನೌಕರರ ಸಂಘದ ಸದಸ್ಯರು, ಕಾಳಿ ಹುಲಿ ಸಂರಕ್ಷಣಾ ವಲಯದಲ್ಲಿ ಬರುವ ಕುಳಗಿ, ಕುಂಬಾರವಾಡ, ಪನ್ಸೋಲೆ, ಗುಂದ, ಕಾನವಾಡ ಕ್ಯಾಂಪ್‌ಗಳಲ್ಲಿ ಕೆಲಸ ಮಾಡುವ ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದಾರೆ.

ಚೆಕ್‌ಪೋಸ್ಟ್ ಗಾರ್ಡ್‌ಗಳು, ಅರಣ್ಯ ವೀಕ್ಷಕರು, ಅರಣ್ಯ ಕಾವಲುಗಾರರು, ನಿಸ್ತಂತು ನಿರ್ವಾಹಕರು, ಲಿಪಿಕ ಸಹಾಯಕರು, ಪ್ರವಾಸಿ ಮಾರ್ಗದರ್ಶಕರು, ಅಡುಗೆ ಸಿಬ್ಬಂದಿ ಹಾಗೂ ಅವರ ಸಹಾಯಕರು ಸೇರಿದಂತೆ 295 ನೌಕರರು ಪಾಲ್ಗೊಂಡಿದ್ದಾರೆ.

ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ನೌಕರರ ಸಂಘದ ಅಧ್ಯಕ್ಷಹರೀಶ್ ಜಿ. ನಾಯಕ ಮಾತನಾಡಿ, ‘ಜೀವ ವೈವಿಧ್ಯತೆಯ ರಕ್ಷಣೆಯಲ್ಲಿ ಅರಣ್ಯ ರಕ್ಷಕರ ಪಾತ್ರ ಮಹತ್ವದ್ದು. ಸ್ಥಳೀಯರ ಜ್ಞಾನವನ್ನು ಪರಿಸರ ಸಂರಕ್ಷಣೆಯಲ್ಲಿ ಬಳಸಿಕೊಳ್ಳಬೇಕು. ಕಾಳಿ ಹುಲಿ ಸಂರಕ್ಷಿತ ವಲಯಕ್ಕೆ ಸರ್ಕಾರದಿಂದ ಬರುವ ಅನುದಾನವನ್ನು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳು ಹೇಗೆ ಬಳಸಬೇಕು ಎಂದು ಗೊತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕಾಳಿ ಹುಲಿ ಯೋಜನೆಗೆ ನಿರ್ವಹಿಸಲು ವರ್ಷಕ್ಕೆ ₹ 10 ಕೋಟಿ ಬೇಕು. ಆದರೆ, ಸರ್ಕಾರ ₹ 5 ಕೋಟಿಯನ್ನು ಮಾತ್ರವೇ ಕೊಡುತ್ತಿದೆ. ಹೀಗಾಗಿ ನೌಕರರ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತಿದೆ. ಇಲ್ಲಿ ನಮ್ಮ ಬದುಕಿನ ಪ್ರಶ್ನೆ ಇದೆ. ಹಾಗಾಗಿ ನಾವು ನ್ಯಾಯ ಸಿಗುವವರೆಗೂ ಹೋರಾಡುತ್ತೇವೆ’ ಎಂದರು.

ಕಾಳಿ ಬ್ರಿಗೇಡ್‌ನ ರವಿ ರೇಡ್ಕರ್, ‘ಕಾಡಿನ ಜೀವ ವೈವಿಧ್ಯವನ್ನು ಕಾಪಾಡುವಲ್ಲಿಸ್ಥಳೀಯವಾಗಿ ನೇಮಕಗೊಂಡ ನೌಕರರಷ್ಟು ಸಮರ್ಥರು ಯಾರೂ ಇಲ್ಲ. ನ್ಯಾಯುತವಾದ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು’ ಎಂದು ಒತ್ತಾಯಿಸಿದರು.

ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಟೆನಸಿ, ಪ್ರಮುಖರಾದ ಸಲೀಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT