ಕಾರವಾರ: ಜಿಲ್ಲೆಯಲ್ಲಿ ಜಾರಿಯಾಗಬೇಕಿರುವ ಬಹು ನಿರೀಕ್ಷಿತ ರೈಲ್ವೆ ಯೋಜನೆಗಳಿಗೆಕೇಂದ್ರ ಸರ್ಕಾರದ ಮುಂಗಡಪತ್ರದಲ್ಲಿಈ ಬಾರಿಯೂ ಅನುದಾನದ ಉಲ್ಲೇಖವಿಲ್ಲ. ಹೊನ್ನಾವರ– ತಾಳಗುಪ್ಪ ರೈಲು ಮಾರ್ಗ ನಿರ್ಮಾಣಕ್ಕೆ ಸಮೀಕ್ಷೆ ಪೂರ್ಣಗೊಳ್ಳಲು ಬೇಕಿರುವ ₹ 20.50 ಲಕ್ಷವನ್ನೂ ಬಜೆಟ್ನಲ್ಲಿ ನಿಗದಿ ಮಾಡಿಲ್ಲ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ.1ರಂದು ಮಂಡಿಸಿದ ಮುಂಗಡಪತ್ರದಲ್ಲಿ ಜಿಲ್ಲೆಯ ರೈಲ್ವೆ ಕಾಮಗಾರಿಗಳಿಗೆ ಅನುದಾನ ನಿಗದಿಯಾಗುವ ಆಶಯವಿತ್ತು. ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ, ಉತ್ತರ ಕನ್ನಡದ ನೆರೆಯ ಜಿಲ್ಲೆ ಬೆಳಗಾವಿಯವರು. ಇಲ್ಲಿನ ಸಮಸ್ಯೆಗಳು, ಬೇಡಿಕೆಗಳಿಗೆ ಮನ್ನಣೆ ಸಿಗಬಹುದು ಎಂಬ ನಿರೀಕ್ಷೆ ಜನರಲ್ಲಿ ಮೂಡಿತ್ತು.ಆದರೆ, ಅವು ಬಜೆಟ್ನಲ್ಲಿ ನಿಜವಾಗದೇ ಮತ್ತದೇ ನಿರಾಸೆ ಉಂಟಾಗಿದೆ.
ಹೊನ್ನಾವರ– ತಾಳಗುಪ್ಪ ನಡುವೆ 82 ಕಿಲೋಮೀಟರ್ ಉದ್ದದ ಹಳಿ ನಿರ್ಮಾಣ ಮಾಡಬೇಕು ಎಂಬುದು ಒಂದು ದಶಕದ ಬೇಡಿಕೆಯಾಗಿದೆ. ಅದರ ಸಮೀಕ್ಷೆ ಕಾರ್ಯಕ್ಕೆ ಕಳೆದ ವರ್ಷದ ಕೇಂದ್ರ ಮುಂಗಡಪತ್ರದಲ್ಲಿ ₹ 1 ಕೋಟಿ ನಿಗದಿ ಮಾಡಲಾಗಿತ್ತು. ಸಮೀಕ್ಷೆ ಪೂರ್ಣಗೊಳ್ಳಲು ಮತ್ತೂ ₹ 20.50 ಲಕ್ಷ ಅಗತ್ಯವಿದೆ ಎಂದು ಈ ಬಾರಿಯ ಮುಂಗಡಪತ್ರದಲ್ಲೂಗುರುತಿಸಲಾಗಿದೆ. ಆದರೆ, ಆ ಹಣವನ್ನು ಬಿಡುಗಡೆ ಮಾಡುವ ಬಗ್ಗೆ ಮಾತ್ರ ಉಲ್ಲೇಖಿಸಿಲ್ಲ.
‘ಹೊನ್ನಾವರ– ತಾಳಗುಪ್ಪ ನಡುವೆ ಹಳಿ ನಿರ್ಮಾಣವಾದರೆ ಜಿಲ್ಲೆಯ ಕರಾವಳಿಯು ಘಟ್ಟದ ಮೇಲಿನ ಪ್ರದೇಶಗಳಿಗೆ ಮತ್ತಷ್ಟು ಹತ್ತಿರವಾಗುತ್ತದೆ. ಇದರಿಂದ ಎರಡೂ ಕಡೆಗಳಲ್ಲಿ ವ್ಯಾಪಾರ ವಹಿವಾಟು, ಜನರ ಸಂಪರ್ಕ ಬೆಳೆಯುತ್ತದೆ. ದೇಶದ ಅರ್ಥ ವ್ಯವಸ್ಥೆಯ ಮೇಲೂ ಸಕಾರಾತ್ಮಕ ಪರಿಣಾಮವಾಗುತ್ತದೆ. ಆದರೆ, ಕಾಮಗಾರಿ ಅನುಷ್ಠಾನಕ್ಕೆ ಬೇಕಿರುವಸಮೀಕ್ಷೆಗೆ ಹಣ ನೀಡದಿದ್ದರೆ ಉಳಿದ ಕೆಲಸಗಳು ಹೇಗೆ ಮುಂದೆ ಸಾಗುತ್ತವೆ’ ಎನ್ನುವುದು ಕುಮಟಾದ ಕೃಷ್ಣ ಭಟ್ ಅವರ ಪ್ರಶ್ನೆಯಾಗಿದೆ.
‘ರಾಜ್ಯದ ಕರಾವಳಿಯಲ್ಲಿ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾತ್ರರೈಲ್ವೆ ಹಳಿಯು ಘಟ್ಟದ ಮೇಲಿನ ಭಾಗವನ್ನು ಸಂಪರ್ಕಿಸುತ್ತದೆ.ಹೀಗಾಗಿಸುಮಾರು 350 ಕಿಲೋಮೀಟರ್ವ್ಯಾಪ್ತಿಯಜನರು ಇಂದಿಗೂ ರಸ್ತೆಯನ್ನೇ ಅವಲಂಬಿಸಬೇಕಾಗಿದೆ. ಹೊನ್ನಾವರ– ತಾಳಗುಪ್ಪಅಥವಾಅಂಕೋಲಾ– ಹುಬ್ಬಳ್ಳಿ ರೈಲು ಹಳಿಗಳ ನಿರ್ಮಾಣ ಅತ್ಯಗತ್ಯವಾಗಿದೆ’ ಎನ್ನುತ್ತಾರೆ ರೈಲ್ವೆ ಹೋರಾಟಗಾರ ಕುಮಟಾದ ಸತೀಶ ನಾಯ್ಕ.
‘ಇಚ್ಛಾಶಕ್ತಿ ಪ್ರದರ್ಶಿಸಲಿ’
‘ಕರಾವಳಿಯ ರೈಲ್ವೆ ಯೋಜನೆಗಳಿಗೆ ಕೇಂದ್ರ ಮುಂಗಡಪತ್ರದಲ್ಲಿ ಹಣ ನಿಗದಿ ಮಾಡದಿರುವುದುಬೇಸರ ತಂದಿದೆ. ನಮ್ಮ ಜಿಲ್ಲೆಯ ರಾಜಕಾರಣಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಜಿಲ್ಲೆಗೆ ಹಿನ್ನಡೆಯಾಗಿದೆ’ ಎನ್ನುವುದು ಸತೀಶ ನಾಯ್ಕ ಅವರ ಅಭಿಮತ.
‘ದಕ್ಷಿಣ ಕನ್ನಡದಲ್ಲೂ ಪಶ್ಚಿಮ ಘಟ್ಟವಿದೆ. ಆದರೆ, ಅಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಎಲ್ಲರೂ ಒಟ್ಟಾಗುತ್ತಾರೆ. ಅಂತಹ ಮನೋಭಾವ ಇಲ್ಲಿ ಕಾಣುವುದಿಲ್ಲ’ ಎಂದು ಬೇಸರಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.