ಕುಮಟಾ: ಲಾಕ್ಡೌನ್ ಸಂದರ್ಭದಲ್ಲಿ ವಾಹನ ವ್ಯವಸ್ಥೆಯಿಲ್ಲದೆ, ಮಂಗಳೂರಿನಿಂದ ತಮ್ಮ ಊರು ಮಧ್ಯಪ್ರದೇಶಕ್ಕೆ 24 ಕಾರ್ಮಿಕರು ನಡೆದುಕೊಂಡು ಹೊರಟಿದ್ದರು.ಈ ವಿಚಾರ ತಿಳಿದಉಪ ವಿಭಾಗಾಧಿಕಾರಿ ಎಂ.ಅಜಿತ್ ಹಾಗೂ ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಸುರೇಶ, ಕಾರ್ಮಿಕರನ್ನುರಾಜ್ಯಗಡಿಭಾಗದವರೆಗೆ ಕಳುಹಿಸಿಕೊಟ್ಟಿದ್ದಾರೆ.
ತಾಲ್ಲೂಕಿನ ಹಂದಿಗೋಣದಲ್ಲಿ ಭಾನುವಾರ, ಮಂಗಳೂರಿನಿಂದ ಬಂದ ವಲಸೆ ಕಾರ್ಮಿಕರು ವಿಶ್ರಾಂತಿ ಪಡೆಯುತ್ತಿರುವ ಮಾಹಿತಿ ಅಜಿತ್ ಅವರಿಗೆ ಲಭಿಸಿತ್ತು. ಈ ಬಗ್ಗೆಪರಿಶೀಲಿಸಲು ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಸುರೇಶ ಅವರಿಗೆ ಸೂಚಿಸಿದರು. ತಕ್ಷಣ ಅಲ್ಲಿಗೆ ಧಾವಿಸಿದ ಸುರೇಶ, 12 ಜನ ಕಾರ್ಮಿಕರನ್ನು ಮಾತನಾಡಿಸಿ ವಿಶ್ವಾಸಕ್ಕೆ ತೆಗೆದುಕೊಂಡರು.
ಕುಮಟಾ ಪುರಭವನ ತನಕ ನಡೆದುಕೊಂಡು ಹೋಗಲು ಮನವೊಲಿಸಿದರು. ಕುಮಟಾವರೆಗೆ ಬಂದ ಅವರು ಅಲ್ಲಿ ನಿಂತಿದ್ದ ಯಾವುದೋ ವಾಹನ ಹತ್ತಿ ಪರಾರಿಯಾಗಲು ಯತ್ನಿಸಿದರು. ಪೊಲೀಸರ ಸಹಾಯದಿಂದ ತಕ್ಷಣ ಅವರನ್ನು ಬೆನ್ನಟ್ಟಿದ ಎಂ.ಕೆ.ಸುರೇಶ, ವಾಪಸ್ ಕರೆಸಿದರು. ಕಾರ್ಮಿಕರಿಗೆ ರಾತ್ರಿ ಪುರಭವನದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿ ಊಟ, ತಿಂಡಿ ಕೊಟ್ಟರು.
ಅವರನ್ನು ವಿಚಾರಣೆಗೆ ಒಳಪಡಿಸಿದಾಗ 12 ಜನರ ಇನ್ನೊಂದು ತಂಡ ಕೂಡ ಹಿಂದಿನಿಂದ ಬರುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾಡಳಿತದ ಅನುಮತಿ ಪಡೆದು ಎರಡೂ ತಂಡಗಳಿಗೆ ಪ್ರತ್ಯೇಕ ವಾಹನಗಳ ವ್ಯವಸ್ಥೆ ಮಾಡಲಾಯಿತು. ಬಳಿಕ ಕರ್ನಾಟಕದ ಗಡಿ ಬೆಳಗಾವಿಯವರೆಗೆ ಅವರನ್ನು ಕಳುಹಿಸಿಕೊಡಲಾಯಿತು.
ಮಂಗಳೂರಿನಿಂದ ಕುಮಟಾದವರೆಗೆ ಎಲ್ಲ ಚೆಕ್ಪೋಸ್ಟ್ಗಳನ್ನು ಅವರು ಹೇಗೆ ದಾಟಿ ಬಂದರು ಎಂದು ಕಾರ್ಮಿಕರನ್ನು ನೋಡಿದ ಸಾರ್ವಜನಿಕರುಕುತೂಹಲ ವ್ಯಕ್ತಪಡಿಸಿದ್ದಾರೆ.
‘ಮಾನವೀಯ ನೆಲೆಯಲ್ಲಿ ಸಹಾಯ’: ‘ಮಂಗಳೂರಿನಲ್ಲಿಕೂಲಿ ಕೆಲಸಕ್ಕೆ ಬಂದಿದ್ದ ಅವರು 50 ದಿನಗಳ ಲಾಕ್ಡೌನ್ ಅವಧಿಯಲ್ಲಿ ವಾಹನ ವ್ಯವಸ್ಥೆಯಿಲ್ಲದೆ ಹತಾಶರಾಗಿದ್ದರು. 1,700 ಕಿ.ಮೀ. ದೂರದ ಮಧ್ಯಪ್ರದೇಶಕ್ಕೆ ನಡೆದೇ ಹೊರಟಿದ್ದರು. ಮಾನವೀಯ ದೃಷ್ಟಿಯಿಂದ ಅವರಿಗೆ ಆಶ್ರಯ ನೀಡಿದ್ದೇವೆ. ಬಳಿಕ ಜಿಲ್ಲಾಡಳಿತದ ಅನುಮತಿ ಮೇರೆಗೆ ಬೆಳಗಾವಿಯವರೆಗೆ ಕಳಿಸಿಕೊಡಲಾಯಿತು’ ಎಂದು ಎಂ.ಕೆ. ಸುರೇಶ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.