ಕಾರವಾರ: ‘ನಗರದ ಕೋಡಿಬಾಗ ರಸ್ತೆ ಮತ್ತು ಹೂವಿನ ಚೌಕಕ್ಕೆ ಸೋಂದಾ ಸಾಮ್ರಾಜ್ಯದ ಸೇನಾಧಿಪತಿಯಾಗಿದ್ದ ಹೆಂಜಾ ನಾಯ್ಕ ಅವರ ಹೆಸರಿಡಲು ಸರ್ಕಾರದಿಂದ ಅನುಮತಿ ಸಿಕ್ಕಿದೆ. ಡಿಸೆಂಬರ್ ಒಳಗಾಗಿ ನಾಮಕರಣ ಮಾಡುವುದಾಗಿ ಶಾಸಕಿ ರೂಪಾಲಿ ನಾಯ್ಕ ಭರವಸೆ ನೀಡಿದ್ದಾರೆ’ ಎಂದು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದ ಕೋಡಿಬಾಗದಲ್ಲಿ ಹುಟ್ಟಿ ಬೆಳೆದ ಹೆಂಜಾ ಅವರ ಹೆಸರನ್ನು ನ.15ರ ಒಳಗಾಗಿ ನಾಮಕರಣ ಮಾಡುವಂತೆ ಅಭಿಮಾನಿಗಳ ಬಳಗವು ಆಗ್ರಹಿಸಿತ್ತು. ಈ ಬಗ್ಗೆ ಶಾಸಕಿ ರೂಪಾಲಿ ನಾಯ್ಕ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ನಗರಸಭೆ ಆಯುಕ್ತ ಆರ್.ಪಿ.ನಾಯ್ಕ ಹಾಗೂ ಎಲ್ಲ 31 ಸದಸ್ಯರ ಸಹಮತ ವ್ಯಕ್ತಪಡಿಸಿದ್ದರು. ನಮ್ಮ ಬೇಡಿಕೆಗೆ ಈಗ ಜಯ ಸಿಕ್ಕಿದೆ’ ಎಂದರು.
‘ಹೂವಿನ ಚೌಕದಲ್ಲಿ ಹೆಂಜಾ ನಾಯ್ಕ ವೃತ್ತ ನಿರ್ಮಿಸುವ ಬಗ್ಗೆ ನಗರಸಭೆಯಿಂದ ನಕ್ಷೆ ಸಿದ್ಧಪಡಿಸಲಾಗಿದೆ. ಅಲ್ಲಿರುವ ಹೈಮಾಸ್ಟ್ ವಿದ್ಯುದ್ದೀಪವನ್ನು ಬಳಸಿಕೊಂಡೇ ಕಾಮಗಾರಿ ಮಾಡುವುದು ಸೂಕ್ತ’ ಎಂದು ಅಭಿಪ್ರಾಯಪಟ್ಟರು.