ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಉಪ್ಪು ನೀರು ತಡೆಗೆ ಫ್ಲ್ಯಾಪ್ ಗೇಟ್ ಅಳವಡಿಸಲು ಒತ್ತಾಯ

Last Updated 4 ಮೇ 2022, 12:45 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಹಣಕೋಣ ಗ್ರಾಮದ ಖಾರ್ಲ್ಯಾಂಡ್ ಒಡ್ಡುಗಳಿಗೆ ಫ್ಲ್ಯಾಪ್‌ ಗೇಟ್‌ಗಳನ್ನು ಅಳವಡಿಸಬೇಕು. ಈ ಮೂಲಕ ಗ್ರಾಮಕ್ಕೆ ಉಪ್ಪು ನೀರು ಹರಿಯುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಒತ್ತಾಯಿಸಿದ್ದಾರೆ.

ಸಚಿವರು ನಗರದಲ್ಲಿ ಬುಧವಾರ ಹಮ್ಮಿಕೊಂಡ ಸಾರ್ವಜನಿಕರ ಕುಂದುಕೊರತೆ ಸ್ವೀಕಾರ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದರು.

ಗ್ರಾಮದಲ್ಲಿ ಖಾರ್ಲ್ಯಾಂಡ್‌ಗೆ ಒಡ್ಡು ನಿರ್ಮಿಸುವ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಗಿದೆ. ಆದರೆ, ಕಾಮಗಾರಿ ಪೂರ್ಣಗೊಳ್ಳಲು ಬಹಳ ಸಮಯ ಬೇಕಾಗಲಿದೆ. ಅಲ್ಲದೇ ಗ್ರಾಮದ ಕೆಲವು ಪ್ರದೇಶಗಳು ಈ ಯೋಜನೆಯಲ್ಲಿ ಸೇರಿಲ್ಲ ಎನ್ನಲಾಗಿದೆ. ಒಂದುವೇಳೆ, ಬಿಟ್ಟಿದ್ದರೆ ಯೋಜನೆಯು ಫಲ ನೀಡದು. ಗ್ರಾಮದಲ್ಲಿರುವ ಉಪ್ಪು ನೀರಿನ ಸಮಸ್ಯೆ ಬಗೆ ಹರಿಯುವುದಿಲ್ಲ. ಹಾಗಾಗಿ ಬಿಟ್ಟಿರುವ ಪ್ರದೇಶಗಳನ್ನೂ ಯೋಜನೆಗೆ ಸೇರಿಸಬೇಕು ಅಥವಾ ಪ್ರತ್ಯೇಕ ಕಾಮಗಾರಿ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ಮೊದಲು ಉಪ್ಪು ನೀರು ಹರಿಯುವುದನ್ನು ತಡೆಯಲು ದ್ವೀಪದ ಬದಿಯಲ್ಲಿ ಒಡ್ಡಿಗೆ ಹಲಗೆ ಅಳವಡಿಸಿ ಅದರಲ್ಲಿ ರಾಡಿ ಮಣ್ಣನ್ನು ತುಂಬಲಾಗುತ್ತಿತ್ತು. ಮತ್ತೊಂದು ಪೈಪ್‌ಗೆ ಫ್ಲ್ಯಾಪ್ ಗೇಟ್ ಅಳವಡಿಸುತ್ತಿದ್ದರು. ಅದರಂತೆ ಕ್ರಮ ಕೈಗೊಳ್ಳಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ನಾಲ್ಕೈದು ತಿಂಗಳಾದರೂ ಸ್ಪಂದಿಸಿಲ್ಲ ಎಂದು ದೂರಿದರು.

ಗ್ರಾಮದಲ್ಲಿ ಉಪ್ಪು ನೀರು ನಿಲ್ಲುವ ಪ್ರದೇಶದಲ್ಲಿ ದಟ್ಟವಾಗಿ ಗಿಡಗಂಟೆ ಬೆಳೆದಿವೆ. ಅವುಗಳಲ್ಲಿ ಹಾವುಗಳು ಸೇರಿದಂತೆ ವಿಷ ಜಂತುಗಳು ವಾಸಿಸುತ್ತಿವೆ. ಅದೇ ನೀರು ಇಂಗಿ ಸುತ್ತಮುತ್ತಲಿನ ಬಾವಿಗಳಲ್ಲಿ ತುಂಬಿಕೊಳ್ಳುತ್ತಿದೆ. ಇದರಿಂದ ಸ್ಥಳೀಯರ ಆರೋಗ್ಯಕ್ಕೂ ಹಾನಿಯಾಗುತ್ತಿದೆ. ಆದ್ದರಿಂದ ಪ್ರದೇಶದಲ್ಲಿ ಸ್ವಚ್ಛತೆ ಕೈಗೊಳ್ಳಲು ಸೂಚಿಸಬೇಕು ಎಂದು ಒತ್ತಾಯಿಸಿದರು.

ವಿವಿಧ ಸಾರ್ವಜನಿಕರ ಅಹವಾಲುಗಳನ್ನು, ಹಿರಿಯ ನಾಗರಿಕರ ಮನವಿಗಳನ್ನು ಸಚಿವರು ಸ್ವೀಕರಿಸಿ ಕ್ರಮ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT