ಕಾರವಾರ: ಜುಲೈ 22 ಹಾಗೂ 23ರಂದು ಸುರಿದ ಭಾರಿ ಮಳೆಯಿಂದ ಉಂಟಾದ ಹಾನಿಯ ಮತ್ತಷ್ಟು ನಿದರ್ಶನಗಳು ಒಂದೊಂದೇ ತೆರೆದುಕೊಳ್ಳುತ್ತಿವೆ. ತಾಲ್ಲೂಕಿನ ಕೊಡಸಳ್ಳಿ ಹಾಗೂ ಕದ್ರಾ ಜಲಾಶಯಗಳ ಮೇಲ್ಭಾಗದಲ್ಲಿ ದಟ್ಟಾರಣ್ಯದ ನಡುವೆ ಭಾರಿ ಪ್ರಮಾಣದಲ್ಲಿ ಭೂ ಕುಸಿತವಾಗಿದೆ.
ಜಲಾಶಯಗಳ ಮೇಲ್ಭಾಗದಿಂದ ಹಲವಾರು ಕಡೆಗಳಲ್ಲಿ ಅಪಾರ ಪ್ರಮಾಣದಲ್ಲಿ ಗುಡ್ಡದ ಮಣ್ಣು ಕುಸಿದು ಕೆಳಗೆ ಜಾರಿದೆ. ಅವೆಷ್ಟೋ ಮರ ಗಿಡಗಳು, ಬಂಡೆಗಳು ಹಾಗೂ ಸಾವಿರಾರು ಟನ್ ಮರಳು ಮಿಶ್ರಿತ ಮಣ್ಣು ಕೆಳಭಾಗದ ಜಮೀನನ್ನು ಆವರಿಸಿಕೊಂಡಿವೆ. ತೋಟ ಹಾಗೂ ಗದ್ದೆಗಳಿಗೆ ಹಾನಿಯಾಗಿದೆ.
‘ಈ ಭಾಗದಲ್ಲಿ ಇದಕ್ಕಿಂತಲೂ ಹೆಚ್ಚು ಮಳೆಯಾಗಿದ್ದನ್ನು ಈ ಹಿಂದೆ ಕಂಡಿದ್ದೇವೆ. ಆದರೆ, ಈ ಪ್ರಮಾಣದಲ್ಲಿ ಮಣ್ಣು ಕುಸಿದಿರುವುದು ಇದೇ ಮೊದಲು. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾದರೆ ಮತ್ತಷ್ಟು ಪ್ರಮಾಣದಲ್ಲಿ ಮಣ್ಣು ಕುಸಿಯಬಹುದು ಎಂಬ ಆತಂಕ ಕಾಡುತ್ತಿದೆ’ ಎನ್ನುತ್ತಾರೆ ಕದ್ರಾ ಗ್ರಾಮ ಪಂಚಾಯಿತಿ ಸದಸ್ಯ ಶ್ಯಾಮನಾಥ ನಾಯ್ಕ ಹೇಳುತ್ತಾರೆ.
‘ಕೊಡಸಳ್ಳಿ ಜಲಾಶಯದ ಮೇಲ್ಭಾಗದಲ್ಲಿ 2019ರಲ್ಲಿ ಗುಡ್ಡ ಕುಸಿದಿತ್ತು. ಈ ಸಲ ಕೆಳಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದಿದೆ. ಈ ಭಾಗದಲ್ಲಿ ಕೈಗಾ ಅಣು ವಿದ್ಯುತ್ ಉತ್ಪಾದನಾ ಸ್ಥಾವರ, ಕದ್ರಾ ಜಲ ವಿದ್ಯುತ್ ಘಟಕಗಳಿವೆ. ಇವುಗಳ ಸುರಕ್ಷತೆಯನ್ನೂ ಗಮನಕ್ಕೆ ಗಮನಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಸರ್ಕಾರವು ಪರಿಣತರನ್ನು ಕರೆಯಿಸಿ ಸ್ಥಳ ಪರೀಕ್ಷೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈಗಾಗಲೇ ಪ್ರಕೃತಿ ವಿಕೋಪದಲ್ಲಿ ಮನೆ, ಆಸ್ತಿ, ಜಾನುವಾರು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಪುನರ್ವಸತಿ ಕಲ್ಪಿಸಿಕೊಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.