ಗೋಕರ್ಣ: ಮಾಘಮಾಸದ ಅಮವಾಸ್ಯೆಯ ದಿನ ಭಾನುವಾರದಂದು ಗೋಕರ್ಣದಲ್ಲಿ ಸಾವಿರಾರು ಭಕ್ತರು ಸಮುದ್ರ ತೀರದಲ್ಲಿ ಪಡಿ ಸಮರ್ಪಿಸಿ ಕೃತಾರ್ಥರಾದರು.
ಕೆಲವರು ಸಮುದ್ರದಲ್ಲಿ ಸ್ನಾನ ಮಾಡಿ ದಡದಲ್ಲಿ ಸಾಲಾಗಿ ಕುಳಿತಿದ್ದ ಭಿಕ್ಷುಕರಿಗೆ ಅಕ್ಕಿ, ಹಣ ನೀಡಿದ್ದು ಕಂಡು ಬಂದಿತು. ಇನ್ನು ಕೆಲವರು ಮುಡಿ ಸಮರ್ಪಿಸಿ, ಪಡಿ ನೀಡಿ ಧನ್ಯರಾದರು. ಈ ಪದ್ಧತಿ ಪರಂಪರಾಗತವಾಗಿ ನಡೆದುಕೊಂಡು ಬಂದಿದೆ. ಸುತ್ತಮುತ್ತಲಿನ ಹಳ್ಳಿಯ ಜನರೆಲ್ಲ ತಪ್ಪದೇ ಪಡಿ ಹಾಕುವ ಈ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಗೋಕರ್ಣ ಪವಿತ್ರ ಕ್ಷೇತ್ರವಾದ್ದರಿಂದ, ತಮ್ಮ ಪಿತೃಗಳ ಸಂತೃಪ್ತಿಗೋಸ್ಕರ ಸಮುದ್ರದಲ್ಲಿ ಸ್ನಾನ ಮಾಡಿ ತೆಂಗಿನಕಾಯಿ, ಅಕ್ಕಿ, ಹಣವನ್ನು ದಾನ ಮಾಡುವ ಪದ್ಧತಿ ಮೊದಲಿನಿಂದ ರೂಢಿಯಲ್ಲಿ ಬೆಳೆದು ಬಂದಿದೆ. ಅದರಂತೆ ಪ್ರತಿ ಕುಟುಂಬದವರು ಇದನ್ನು ಅನುಸರಿಸುತ್ತಾರೆ.
ತಿಲ ತರ್ಪಣ: ಮೂರು ತಲೆಮಾರಿನ ಪಿತೃಗಳಿಗೆ ಸಮುದ್ರ ದಂಡೆಯಲ್ಲಿ ತಿಲ ತರ್ಪಣ ನೀಡುವುದು ನಡೆದು ಬಂದ ಪದ್ಧತಿ. ಅದೇ ರೀತಿ ಭಾನುವಾರ ಸುತ್ತಮುತ್ತಲಿನ ಹಳ್ಳಿಯ ಜನರು, ಪುರೋಹಿತರ ಸಹಾಯದೊಂದಿಗೆ ತಮ್ಮ ಪೂರ್ವಜರಿಗೆ ತರ್ಪಣ, ಪಿಂಡಪ್ರಧಾನ ಮಾಡಿದರು.