ಶಿರಸಿ: ದ್ವೈವಾರ್ಷಿಕಕ್ಕೆ ಒಮ್ಮೆ ನಡೆಯುವ ಮಾರಿಕಾಂಬಾ ದೇವಿ ಜಾತ್ರೆಗೆ ಸಿದ್ಧತೆ ಆರಂಭಗೊಂಡಿದ್ದು ಬಿಡ್ಕಿಬೈಲಿನಲ್ಲಿ ದೇವಿಯ ಗದ್ದುಗೆ ಸುತ್ತ ಇರುವ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲಾಗುತ್ತಿದೆ.
ಬಿಡ್ಕಿಬೈಲ್, ಕೋಣನ ಬಿಡ್ಕಿಯಲ್ಲಿರುವ ಸುಮಾರು 190 ಅಂಗಡಿಗಳನ್ನು ಜಾತ್ರೆ ಸಲುವಾಗಿ ತೆರವು ಮಾಡಲಾಗುತ್ತದೆ. ಶನಿವಾರದಿಂದಲೇ ಕೆಲವು ಅಂಗಡಿಗಳನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು. ಭಾನುವಾರ 50ಕ್ಕೂ ಹೆಚ್ಚು ಮಳಿಗೆಗಳನ್ನು ತೆರವು ಮಾಡಲಾಯಿತು.
ತರಕಾರಿ ಮಾರುಕಟ್ಟೆಯ ಮಳಿಗೆಗಳು, ಬಿಡ್ಕಿಬೈಲ್ ಒಳ ಆವರಣ ಮತ್ತು ಹೊರ ಆವರಣದಲ್ಲಿರುವ ಹೂವು, ಹಣ್ಣು, ದಿನಸಿ ಮಳಿಗೆಗಳು ತೆರವುಗೊಂಡಿವೆ. ಬಸ್ ನಿಲ್ದಾಣದ ಪಕ್ಕದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಲು ಆಯಾ ಅಂಗಡಿಕಾರರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ದೇವಿ ಪ್ರತಿಷ್ಠಾಪನೆಗೊಳ್ಳಲಿರುವ ಜಾತ್ರಾ ಗದ್ದುಗೆ ಸಿದ್ಧಪಡಿಸುವ ಕೆಲಸ ಭರದಿಂದ ಸಾಗಿದೆ. ಸಭಾ ಮಂಟಪ ನಿರ್ಮಾಣದ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ.
‘ಜಾತ್ರೆಗೆಹದಿನೈದು ದಿನ ಮಾತ್ರ ಬಾಕಿ ಇದ್ದು, ಅಗತ್ಯ ಸಿದ್ಧತೆಗಳನ್ನು ಮಾಡಬೇಕಿರುವುದರಿಂದ ಎರಡು ದಿನದೊಳಗೆ ಮಳಿಗೆ ತೆರವುಗೊಳಿಸಲು ಸೂಚನೆ ನೀಡಲಾಗಿದೆ’ ಎಂದು ಪೌರಾಯುಕ್ತ ಕೇಶವ ಚೌಗುಲೆ ತಿಳಿಸಿದ್ದಾರೆ.