ಶಿರಸಿ: ಹಳ್ಳಿಗಳಲ್ಲಿ ಮೊಬೈಲ್ ಟವರ್ ಸ್ಥಾಪನೆ, ಫೈಬರ್ ಟು ದಿ ಹೋಮ್ (ಎಫ್.ಟಿ.ಟಿ.ಎಚ್.) ಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಮುಂಬರುವ ಅಧಿವೇಶನದಲ್ಲಿ ಮಲೆನಾಡು ಭಾಗದ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಲಿದ್ದಾರೆ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನಗರದ ಟಿ.ಎಂ.ಎಸ್ ಸಭಾಂಗಣದಲ್ಲಿ ಭಾನುವಾರ ಶಿರಸಿ ಟೆಕ್ ಫೋರಂ ಆಯೋಜಿಸಿದ್ದ ‘ವರ್ಕ್ ಫ್ರಂ ಹೋಮ್ ಸವಾಲುಗಳು ಮತ್ತು ಭವಿಷ್ಯದ ಸಾಧ್ಯತೆಗಳು’ ಕುರಿತ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
‘ಹಳ್ಳಿಗಳಿಗೆ ಮರಳಿದ ಯುವಜನರನ್ನು ಸೆಳೆದಿಟ್ಟುಕೊಳ್ಳುವ ಅಗತ್ಯವಿದೆ. ವರ್ಕ್ ಫ್ರಂ ಹೋಮ್ ಇಚ್ಛಾಶಕ್ತಿ ಕಾರಣದಿಂದ ಕಡ್ಡಾಯವಾಗುವ ಸ್ಥಿತಿ ನಿರ್ಮಾಣಗೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಶಿರಸಿ ಫೋರಂ ಟೆಕ್ ಪ್ರಮುಖ ಎಸ್.ಜಿ.ಹೆಗಡೆ ಮಾತನಾಡಿ, ‘ತಂತ್ರಜ್ಞಾನವು ಚಾಲಕನಂತೆ ಆರ್ಥಿಕತೆ, ವಿಜ್ಞಾನ, ಶಿಕ್ಷಣ ಕ್ಷೇತ್ರ ಸೇರಿದಂತೆ ಬಹುತೇಕ ಕ್ಷೇತ್ರಗಳನ್ನು ನಿಭಾಯಿಸುತ್ತಿದೆ’ ಎಂದರು.
ಚಾರ್ಟೆಡ್ ಅಕೌಂಟೆಂಟ್ ವಿನಯ ಹೆಗಡೆ, ‘ದೊಡ್ಡ ಕಂಪನಿಗಳು ಜಿಲ್ಲೆಯಲ್ಲಿ ಶಾಖೆ ಆರಂಭಿಸಲು ಒತ್ತಡ ಹಾಕಬಹುದು. ಕಂಪನಿಗಳಲ್ಲಿ ಉನ್ನತ ಸ್ಥಾನದಲ್ಲಿರುವವರು ಇಚ್ಛಾಶಕ್ತಿ ಪ್ರದರ್ಶಿಸಿ’ ಎಂದರು.
ಹಳ್ಳಿಗಳಲ್ಲಿ ನಗರ ಮಾದರಿಯ ಸೌಕರ್ಯ ಒದಗಿಸುವ ಪ್ರಯತ್ನವಾಗಲಿ. ಕಾರ್ಪೊರೇಟ್ ಸ್ನೇಹಿ ವಾತಾವರಣ ರೂಪುಗೊಳ್ಳಲಿ ಎಂದು ಅರವಿಂದ ಭಟ್ಟ ಹೇಳಿದರು. ವರ್ಕ್ ಫ್ರಂ ಹೋಮ್ ಕಡ್ಡಾಯಗೊಳಿಸುವ ಸಂಬಂಧ ಕಂಪನಿಗಳ ಮೇಲೆ ಸರ್ಕಾರ ಒತ್ತಡ ಹೇರಲಿ ಎಂದು ವಿನಾಯಕ ಒತ್ತಾಯಿಸಿದರು.
ಸಹಕಾರ ಸಂಘಗಳ ಸಹಯೋಗದೊಂದಿಗೆ ಗ್ರಾಮಾಂತರ ಭಾಗದಲ್ಲಿ ಇಂಟರ್ ನೆಟ್ ಸೌಲಭ್ಯ ಸೇವಾ ಕೇಂದ್ರ ಸ್ಥಾಪಿಸಬಹುದು ಎಂದು ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಸಲಹೆ ನೀಡಿದರು.
ರವಿ ಹೆಗಡೆ ಹೂವಿನಮನೆ, ಬಿಎಸ್ಎನ್ಎಲ್ ಡಿಜಿಎಂ ರಾಜೇಶ್ವರಿ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಇದ್ದರು. ಸೀತಾರಾಮ ಭಟ್ಟ ಕೆರೆಕೈ ಸ್ವಾಗತಿಸಿದರು.