ಶಿರಸಿ: ಅರಣ್ಯ ಇಲಾಖೆಯು ಗ್ರುಪ್ ಎ, ಬಿ ವೃಂದದ ಹುದ್ದೆಗಳಿಗೆ ಆಯ್ಕೆ ಮಾಡುವ ಅಭ್ಯರ್ಥಿಗಳು ಕಡ್ಡಾಯವಾಗಿ ಅರಣ್ಯಶಾಸ್ತ್ರ ಪದವಿ ಪಡೆದುಕೊಳ್ಳುವಂತೆ ಆದೇಶ ಮಾಡಬೇಕು ಎಂದು ಒತ್ತಾಯಿಸಿ ಅರಣ್ಯಶಾಸ್ತ್ರ ಪದವಿ ಕಾಲೇಜು ವಿದ್ಯಾರ್ಥಿಗಳು ಶುಕ್ರವಾರ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಕಳೆದ ಕೆಲವು ದಿನಗಳಿಂದ ತರಗತಿ ಬಹಿಷ್ಕರಿಸಿ ಈ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ನ್ಯಾಯ ಸಿಗುವವರೆಗೆ ಅನಿರ್ದಿಷ್ಟಾವಧಿ ಮುಷ್ಕರ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಪ್ರತಿಭಟನಾ ಮೆರವಣಿಗೆ, ಬೀದಿ ನಾಟಕ ಪ್ರದರ್ಶನ ನಡೆಸಿದ್ದ ವಿದ್ಯಾರ್ಥಿಗಳು ಇದೀಗ ಅರಣ್ಯಶಾಸ್ತ್ರ ಪದವೀಧರ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ ಎಂದು ಬಿಂಬಿಸಲು ಧರಣಿ ವೇಳೆ ಅಣಕು ಶವ ಪ್ರದರ್ಶಿಸಿದರು.
‘ವಲಯ ಅರಣ್ಯಾಧಿಕಾರಿ ಹುದ್ದೆಗೆ ಈ ಮೊದಲು ಶೇ 75:25 ಅನುಪಾತ ಜಾರಿಯಲ್ಲಿತ್ತು. ಅದನ್ನು 50:50ಕ್ಕೆ ಇಳಿಕೆ ಮಾಡಿದ್ದು ಸರಿಯಲ್ಲ. ಸರ್ಕಾರ ಆದೇಶ ಹಿಂಪಡೆಯಬೇಕು’ ಎಂದು ಧರಣಿ ನಿರತರು ಒತ್ತಾಯಿಸಿದರು.
‘ನೇಮಕಾತಿ ವೇಳೆ ಅರಣ್ಯಶಾಸ್ತ್ರ ಪದವೀಧರರ ಹೊರತಾದವರಿಗೆ ಆದ್ಯತೆ ಹೆಚ್ಚಿಸಲಾಗುತ್ತಿದೆ. ಉದ್ಯೋಗದಿಂದ ವಂಚಿತರಾಗುತ್ತಿದ್ದೇವೆ’ ಎಂದು ಅಳಲು ತೋಡಿಕೊಂಡರು.
ಸಂಜಯ ಎನ್.ಆರ್., ಹೇಮಂತ್, ಪ್ರಮಥ್ ಹೆಗಡೆ, ಪರಮಾನಂದ, ನಿಖಿತಾ, ರಕ್ಷಾ ಹಾಗೂ ಇತರರು ಇದ್ದರು. ಉಪವಿಭಾಗಾಧಿಕಾರಿ ದೇವರಾಜ್ ಆರ್, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಸಾಲೇರ್ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು.
ಅರಣ್ಯಶಾಸ್ತ್ರ ಪದವಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲಿಸಿದೆ. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಧರಣಿ ಸ್ಥಳಕ್ಕೆ ತೆರಳಿ ನೈತಿಕ ಬೆಂಬಲ ಸೂಚಿಸಿದರು. ಎಸ್.ಕೆ.ಭಾಗವತ, ಜಗದೀಶ ಗೌಡ, ಜಿ.ಎನ್.ಹೆಗಡೆ ಮುರೇಗಾರ, ಗಣೇಶ ದಾವಣಗೆರೆ, ಜ್ಯೋತಿ ಪಾಟೀಲ ಇದ್ದರು.
ಅರಣ್ಯಶಾಸ್ತ್ರ ಪದವಿ ವಿದ್ಯಾರ್ಥಿಗಳ ಸಂಕಷ್ಟವನ್ನು ಸರ್ಕಾರ ಆಲಿಸಿ, ಸಮಸ್ಯೆ ಬಗೆಹರಿಸಬೇಕು. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಬಾರದು .